ಬೆಂಗಳೂರು: ಸಿಎಂ ಸ್ಥಾನ ಸಿಗುವವರೆಗೆ ದಲಿತರು, ಹಿಂದುಳಿದವರ ಅಭಿವೃದ್ಧಿಯ ಮಾತನಾಡಿದ್ದ ಸಿದ್ದರಾಮಯ್ಯ ಅವರು ಈಗ ಮೈತೊಳೆದ ಎತ್ತಿನಂತಾಗಿದ್ದಾರೆ. ಆದರೆ ಈ ಎತ್ತನ್ನು ನಾವು ಸುಮ್ಮನೆ ಬಿಡುವುದಿಲ್ಲ. ಯಾವ ದಲಿತರು, ಹಿಂದುಳಿದವರು ನಿಮಗೆ ಓಟು ಕೊಟ್ಟಿದ್ದಾರೋ, ಅವರ ಅಭಿವೃದ್ಧಿಗೆ ಕೆಲಸ ಮಾಡುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ.
ನಗರದ ಮಲ್ಲೇಶ್ವರದ ಚಂದ್ರಶೇಖರ್ ಆಜಾದ್ ಮೈದಾನದಲ್ಲಿ ನಡೆದ ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಂತ್ಯೋದಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಎರಡೂ ವರೆ ವರ್ಷ ಕಾಲ ಹರಣ ಮಾಡಿದ್ದು ಸಾಕು. ಇನ್ನಾದರೂ ದಲಿತರು ಹಿಂದುಳಿದವರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿ. ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬಿಜೆಪಿಯು ಜನಜಾಗೃತಿ ಮೂಡಿಸಲು ಸರ್ಕಾರವನ್ನು ಎಚ್ಚರಿಸಲು ಹೋರಾಟ ಮಾಡುತ್ತದೆ ಎಂದರು.
ಬಜೆಟ್ ನಲ್ಲಿ ಏನು ಘೋಷಣೆ ಮಾಡಿದ್ದೀರಿ, ಯೋಜನೆಗಳು ಯಾವುದು ಎಂದು ನಿಮಗೂ ಗೊತ್ತಿಲ್ಲ. ನಿಮ್ಮ ಸಮಾಜ ಕಲ್ಯಾಣ ಸಚಿವರಿಗೂ ಗೊತ್ತಿಲ್ಲ. ಹೀಗಾಗಿ ಯೋಜನೆಗಳ ಜಾರಿ ಎಲ್ಲಿಂದ ಬಂತು ಎಂದು ಮುಖ್ಯಮಂತ್ರಿ ಅವರನ್ನು ಟೀಕಿಸಿದರು.
ಬಿಜೆಪಿಯನ್ನು ಟೀಕಿಸದೇ ಊಟ ಸೇರಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಟೀಕಿಸದೇ ಊಟ ಸೇರುವುದಿಲ್ಲ ಎಂದು ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.
Advertisement