ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಗೆ ಜಿಲ್ಲಾ ಆಡಳಿತ ಬರೋಬ್ಬರಿ 89 ಲಕ್ಷ ರುಪಾಯಿಗಳ ವಿಮೆ ಮಾಡಿಸಿದೆ.
ಜಂಬೂ ಸವಾರಿಯಲ್ಲಿ ಭಾಗವಹಿಸುವ ಅರ್ಜುನ್ ನೇತೃತ್ವದ ಮಾವುತರು, ಕಾವಾಡಿಗಳು ಹಾಗೂ ಆನೆಗಳಿಂದ ಉಂಟಾಗಬಹುದಾದ ಆಸ್ತಿ ಮತ್ತು ಜೀವಹಾನಿ ಪರಿಹಾರಕ್ಕಾಗಿ ಒಟ್ಟು 89 ಲಕ್ಷ ರುಪಾಯಿಗಳ ವಿಮೆ ಮಾಡಿಸಲಾಗಿದೆ.
ಇದು ಅಲ್ಪಾವಧಿಯ ವಿಮೆಯಾಗಿದ್ದು, ಸೆಪ್ಟೆಂಬರ್ 3ರಿಂದ ಅಕ್ಟೋಬರ್ 30ರವರೆಗೆ ಜಾರಿಯಲ್ಲಿರುತ್ತದೆ. ಈ ಸಂಬಂಧ ಜನರಲ್ ವಿಮಾ ಕಂಪನಿಗೆ 55 ಸಾವಿರ ರುಪಾಯಿ ಪ್ರಿಮಿಯಂ ಕಟ್ಟಲಾಗಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಕಮಲಾ ಅವರು ತಿಳಿಸಿದ್ದಾರೆ.
ಈ ಬಾರಿ ಅರ್ಜುನ್ ನೇತೃತ್ವದಲ್ಲಿ 12 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದು, ಗಜಪಡೆಗೆ 35 ಲಕ್ಷ ರು., ಆನೆಗಳ ಉಸ್ತುವಾರಿ ನೋಡಿಕೊಳ್ಳಲು ಆಗಮಿಸಿರುವ 24 ಮಂದಿ ಮಾವುತ ಹಾಗೂ ಕಾವಾಡಿಗಳಿಗೆ 24 ಲಕ್ಷ ರು. ಹಾಗೂ ಆನೆಗಳಿಂದ ಉಂಟಾಗಬಹುದಾದ ಆಸ್ತಿಪಾಸ್ತಿ ನಷ್ಟಕ್ಕೆ 30 ಲಕ್ಷ ರುಪಾಯಿ ವಿಮೆ ಮಾಡಿಸಲಾಗಿದೆ.
ಎರಡು ತಿಂಗಳ ಕಾಲ ಬೆಳಗ್ಗೆ-ಸಂಜೆ ಜಂಬೂಸವಾರಿ ನಡೆಯುವ ಮಾರ್ಗದಲ್ಲಿ, ಆರಮನೆ ಬಳಿ ಆನೆಗಳ ಜಂಬೂ ಸವಾರಿ ತಾಲೀಮು ನಡೆಸುವ 12 ಮಾವುತರು ಹಾಗೂ 12 ಕಾವಾಡಿಗಳಿಗೆ ತಲಾ 1 ಲಕ್ಷ ರು. ನಂತೆ 24 ಲಕ್ಷ ರು. ವಿಮೆ ಮಾಡಿಸಲಾಗಿದೆ.
Advertisement