ಬೆಂಗಳೂರು: ಕೆಲವು ಮಹಿಳಾ ಸಂಘಟನೆಯ ಹೋರಾಟಗಾರ್ತಿ ಯರು `ಶೂರ್ಪನಖಿ' ಯರಂತೆ ವರ್ತಿಸುತ್ತಿದ್ದು, ಸುದ್ದಿಯಾಗಲು ತಮಗಿಷ್ಟ ಬಂದ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿರುವ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿವೆ.
`ಮಾಧ್ಯಮದಲ್ಲಿ ಸುದ್ದಿಯಾಗಲು ಸಂಘಟನೆಗಳು ಪ್ರತಿಷ್ಠಿತರ ಚಾರಿತ್ರ್ಯವಧೆ ಮಾಡುತ್ತಿದ್ದಾರೆ ಎಂದು ನೇಸರ್ಗಿ ಹೇಳಿರುವುದು ಖಂಡನೀಯ. ಹೀಗೆ ಹೇಳಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ತಾಕತ್ತಿದ್ದರೆ ನೇರವಾಗಿ ಮಾತನಾಡಲಿ' ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಎಸ್. ಲಕ್ಷ್ಮಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಸರ್ಗಿ ಅವರಿಗೆ ನಿಜವಾಗಿ ಮಹಿಳಾಪರ ಕಾಳಜಿ ಇದ್ದಿದ್ದರೆ ಹೀಗೆ ವರ್ತಿಸುತ್ತಿರಲಿಲ್ಲ. ಅವರು ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ನೂರಾರು ಕಡತಗಳು ನಾಪತ್ತೆಯಾಗುತ್ತಿರಲಿಲ್ಲ. ಇದು ಅವರ ಮಹಿಳಾ ಕಾಳಜಿ ತೋರಿಸುತ್ತದೆ. ಇಂತಹವರು ಸಂಘಟನೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ವ್ಯಂಗ್ಯವಾಡಿದರು.
ಸ್ವಾಮೀಜಿ ವಕ್ತಾರೆಯಂತೆ ವರ್ತನೆ: ರಾಘವೇಶ್ವರ ಸ್ವಾಮಿಗಳ ವಕ್ತಾರೆಯಂತೆ ವರ್ತಿಸಿ ವಿವಿಧ ರೀತಿಯ ಹೇಳಿಕೆ ನೀಡಿರುವ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಸುಮನಾ ಹೆಗಡೆ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ ಕೆ.ಎಸ್. ಲಕ್ಷ್ಮಿ, ಶ್ರೀಗಳ ವಿರುದ್ಧ ದಾಖಲಾಗಿರುವ ಪ್ರಕರಣ ಇನ್ನೂ ನ್ಯಾಯಾಲಯದಲ್ಲೇ ಇದೆ. ಹೀಗಿರುವಾಗ ಮಠದ ವಕ್ತಾರರಂತೆ ಸದಸ್ಯರು ಮಾತನಾಡಿದ್ದಾರೆ. ಅಲ್ಲದೆ ದೂರು ದಾರರ ವಿರುದ್ಧ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಖಂಡಿಸಿದರು.
Advertisement