ಬೆಂಗಳೂರು: ಕೆಐಎಎಲ್ ಹಾಗೂ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಸಂದೇಶ ಮತ್ತು ಕರೆ ಮಾಡಿ ಬಂಧಿತನಾಗಿರುವ ಆರೋಪಿ ಎಂ.ಜಿ.ಗೋಕುಲ್ನ ಕೃತ್ಯಕ್ಕೆ ಸ್ನೇಹಿತೆ ಧನ್ಯ ಯಾವುದೇ ರೀತಿಯಲ್ಲೂ ಸಹಕರಿಸಿಲ್ಲ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಕಾಲೇಜಿನ ಸಹಪಾಠಿ ಹಾಗೂ ತಮ್ಮದೇ ಊರಿನವನು ಎನ್ನುವ ಕಾರಣದಿಂದ ಜೋಸ್ ಪತ್ನಿ ಧನ್ಯ, ಗೋಕುಲ್ ಜತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು. ಆಕೆಗೆ ಆರೋಪಿಯ ಕುತಂತ್ರದ ಬಗ್ಗೆ ಯಾವುದೇ ಅನುಮಾನ ಇರಲಿಲ್ಲ. ಪತಿಯಿಂದ ದೂರು ಮಾಡಿ ಆಕೆಯನ್ನು ಓಲೈಸಿಕೊಳ್ಳುವುದಕ್ಕೆ ಗೋಕುಲ್ ಏರ್ ಪೋರ್ಟ್ಗೆ ಹುಸಿ ಕರೆ ಮಾಡಿದ್ದಾನೆ. ಇದರಲ್ಲಿ ಸ್ನೇಹಿತೆಯ ಪಾತ್ರವಿಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಸಿಬಿ ಡಿಸಿಪಿ ಆರ್.ರಮೇಶ್ ತಿಳಿಸಿದ್ದಾರೆ.