ಸಾರ್ವಜನಿಕವಾಗಿ ಗುದ್ದಾಡಿದ ಇಬ್ಬರು ಎಸ್ ಐಗಳು ಸಸ್ಪೆಂಡ್

ಸಾರ್ವಜನಿಕರ ಎದುರಲ್ಲೇ ಕೈಕೈ ಮಿಲಾಯಿಸಿದ್ದ ಹನುಮಂತನಗರ ಠಾಣೆಯ ಇಬ್ಬರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು...
ಎಸ್ ಐಗಳಾದ ಲಿಂಗಪ್ಪ, ಗಣೇಶ್ ಕುಮಾರ್
ಎಸ್ ಐಗಳಾದ ಲಿಂಗಪ್ಪ, ಗಣೇಶ್ ಕುಮಾರ್
ಬೆಂಗಳೂರು: ಸಾರ್ವಜನಿಕರ ಎದುರಲ್ಲೇ ಕೈಕೈ ಮಿಲಾಯಿಸಿದ್ದ ಹನುಮಂತನಗರ ಠಾಣೆಯ ಇಬ್ಬರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣವೊಂದು ಇತ್ಯರ್ಥಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರ ಎದುರೇ ಹನುಮಂತನಗರ ಠಾಣೆಯ ಇಬ್ಬರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಲಿಂಗಪ್ಪ ಮತ್ತು ಗಣೇಶ್ ಕುಮಾರ್ ಅವರು ಬಡಿದಾಡಿಕೊಂಡಿದ್ದರು. ವಿಷಯ ತಿಳಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಎದುರು ಅನುಚಿತ ವರ್ತನೆ ಆರೋಪದ ಮೇಲೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಸಿಪಿಐ ದಿಲೀಪ್ ಕುಮಾರ್ ಗೆ ಠಾಣೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಲೋಕೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ, ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಚಾಮರಾಜಪೇಟೆ ಎಸಿಪಿ ಅಬ್ದುಲ್ ಸೈಯ್ಯದ್ ಗೆ ಸೂಚನೆ ನೀಡಿದ್ದಾರೆ. 
ಮಹಿಳೆಯರ ನಡುವಿನ ಹಣಕಾಸಿನ ವಿಚಾರ ಬಗೆಹರಿಸುವಾಗ ಇಬ್ಬರ ನಡುವೆ ಸೋಮವಾರ ಜಗಳ ನಡೆದಿದೆ. ಸಹಕಾರನಗರ ನಿವಾಸಿ ನಾಗಗರತ್ನಮ್ಮ ಎಂಬುವರು, ಬಸವನ ಗುಡಿಯ ಜಂಯಂತಿ ಪವಾರ್ ಅವರಿಗೆ ರು.15 ಲಕ್ಷ ಸಾಲವಾಗಿ ಕೊಟ್ಟಿದ್ದರು. ಆದರೆ, ವಾಪಸ್ ಕೊಟ್ಟಿರಲಿಲ್ಲ. ಇದನ್ನು ಕೇಳಿದಾಗ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಯಂತಿ ದೂರು ನೀಡಿದ್ದರು. ಹಣಕ ಕೊಡದೆ ವಂಚಿಸುತ್ತಿದ್ದಾರೆ ಎಂದು ನಾಗರತ್ನಮ್ಮ ಪ್ರತಿ ದೂರು ನೀಡಿದ್ದರು. 
ಈ ಸಂಬಂಧ ಪ್ರಕರಣ ಬಗೆಹರಿಸಲು ಠಾಣೆಗೆ ಕರೆಸಿದ್ದ ಅಪರಾಧ ವಿಭಾಗದ ಎಸ್ ಐ ಲಿಂಗಪ್ಪ, ಇಬ್ಬರ ನಡುವೆ ರಾಜೀ ಸಂಧಾನ ನಡೆಸಿ ಹಣ ವಾಪಸ್ ಕೊಡುವಂತೆ ಒಪ್ಪಿಸಿದ್ದರು. ಅಷ್ಟರಲ್ಲಿ ಠಾಣೆಗೆ ಬಂದ ಕಾನೂನು ಸುವ್ಯವಸ್ಥೆ ವಿಭಾಗ ಎಸ್ ಐ ಗಣೇಶ್ ಮಧ್ಯಪ್ರವೇಶಿಸಿ ಜಯಂತಿ ಅವರಿಗೆ ಸಕ್ಕರೆ ಕಾಯಿಲೆ ಇದೆ ಅವರನ್ನು ಠಾಣೆಗೆ ಕರೆಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರು ಸಬ್ ಇನ್ಸ್ ಪೆಕ್ಟರ್ ಗಳ ನಡುವೆ ಮಾತಿನ ಚಕಮಕಿ ಉಂಟಾಗಿ ಅದು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿಕೊಂಡಿದ್ದಾರೆ. 
ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಎಲ್ಲೆಡೆ ಪ್ರಸಾರ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಸಿಪಿ ಲೋಕೇಶ್ ಕುಮಾರ್ ಅವರು ಇಬ್ಬರನ್ನು ಅಮಾನತುಗೊಳಿಸಿ, ಮುಂದಿನ ತನಿಖೆಗೆ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com