ಜಿಲ್ಲಾ ಸುದ್ದಿ
ಕಬ್ಬನ್ ಪಾರ್ಕ್ ನಲ್ಲಿ ಮಾಜಿ ಕಾರ್ಪೋರೇಟರ್, ಸಹಚರರಿಂದ ವಕೀಲನ ಮೇಲೆ ಹಲ್ಲೆ
ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹಾಗೂ ಆತನ ಮೂವರು ಸಹಚರರು ಕಬ್ಬನ್ ಪಾರ್ಕ್ ನಲ್ಲಿ ವಕೀಲರೊಬ್ಬರ...
ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹಾಗೂ ಆತನ ಮೂವರು ಸಹಚರರು ಕಬ್ಬನ್ ಪಾರ್ಕ್ ನಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಕಾರ್ಪಿಯೋದಲ್ಲಿದ್ದ ಮಾಜಿ ಕಾರ್ಪೋರೇಟರ್ ಹಾಗೂ ಆತನ ಸಹಚರರು ಕಾರು ಪಾರ್ಕಿಂಗ್ ಮಾಡುತ್ತಿದ್ದ ವೇಳೆ ವಕೀಲ ಶ್ರೀನಿವಾಸ್ ಕಾರಿಗೆ ಹಾನಿಯಾಗಿದೆ. ಇದನ್ನು ಪ್ರಶ್ನಿಸಿದ ವಕೀಲನನ್ನು ರಾಜಕಾರಣಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಮತ್ತೊಬ್ಬ ವಕೀಲ ಹಾಗೂ ಇತರರು ಕೂಡಲೇ ಸ್ಥಳಕ್ಕೆ ಧಾವಿಸಿ ಶ್ರೀನಿವಾಸ್ ಅವರನ್ನು ರಕ್ಷಿಸಿದ್ದು, ಹಲ್ಲೆ ನಡೆಸಿದ ದುಷ್ಕರ್ಮಿಗಳು ತಮ್ಮ ಸ್ಕಾರ್ಪಿಯೋವನ್ನು ಬಿಟ್ಟು ಪರಾರಿಯಾಗಿದ್ದಾರೆ.
ನಂತರ ವಕೀಲ ಶ್ರೀನಿವಾಸ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಆದರೆ ತಕ್ಷಣ ಸ್ಥಳಕ್ಕಾಮಿಸದ ಪೊಲೀಸರು, ಆರೋಪಿಗಳ ವಿರುದ್ಧ ಸಂಚಾರಿ ನಿಯಮ ಹಾಗೂ ಕ್ರಿಮಿನಲ್ ಕೇಸ್ ದಾಖಸುವುದಾಗಿ ಹೇಳಿದ್ದಾರೆ. ಆದರೆ ಮೂಲಗಳ ಪ್ರಕಾರ ಸಚಿವರೊಬ್ಬರ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಲವು ವಕೀಲರು, ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ, ಮಾಜಿ ಕಾರ್ಪೋರೇಟರ್ ಹಾಗೂ ಆತನ ಸಹಚರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಾಜಿ ಕಾರ್ಪೋರೇಟರ್ ಮಾಜಿ ಉಪ ಮುಖ್ಯಮಂತ್ರಿಯೊಬ್ಬರ ಆಪ್ತರಾಗಿದ್ದು, ಸ್ಕಾರ್ಪಿಯೋದಲ್ಲಿ ಅವರ ಡಿಎಲ್ ಹಾಗೂ ಆರ್ ಸಿ ಬೂಕ್ ಪತ್ತೆಯಾಗಿದೆ.