ಬೆಂಗಳೂರು: ರಾಜ್ಯದ ವಿವಿಗಳಲ್ಲಿನ ಕುಲಸಚಿವರ ಹುದ್ದೆ ನೇಮಕಕ್ಕೆ ಹೊಸ ನೀತಿ ರೂಪಿಸಲು ಚಿಂತಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಸುಳಿವು
ನೀಡಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಕುಲಸಚಿವರ ಹುದ್ದೆಗೆ ಅದೇ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದವರನ್ನು ನೇಮಿಸಿ-ಕೊಳ್ಳಲಾಗುತ್ತಿತ್ತು. ಇದರಿಂದ ವಿವಿಯ ಆಡಳಿತ, ಪರೀಕ್ಷಾಂಗ, ಮೌಲ್ಯಮಾಪನ ವಿಭಾಗದ ಕುಲಸಚಿವರು ಅಲ್ಲಿನವರೆ ಆಗುತ್ತಿತ್ತು. ಈ ಪದ್ಧತಿಯನ್ನು ಬದಲಿಸಿ ಆಡಳಿತದಲ್ಲಿ ಶಿಸ್ತು ತರಲು ಹೊಸ ನೀತಿ ರೂಪಿಸಲಾಗುತ್ತಿದೆ. ಈ ಪ್ರಕಾರ ಐದು ವರ್ಷ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದವರು ಅಥವಾ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗುವುದು. ಆ ಪ್ರಾಧ್ಯಾಪಕರು ಬೇರೆ ವಿವಿಯವರಾಗಿರುತ್ತಾರೆ ಎಂದು ಸ್ಪಷ್ಪಪಡಿಸಿದರು.
ಉದ್ಯೋಗ ಭದ್ರತೆ, ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಉನ್ನತ ಶಿಕ್ಷಣದ ಪಠ್ಯಕ್ರಮವೂ ಪೂರಕವಾಗಿರಬೇಕು. ತಾಂತ್ರಿಕ ಪದವಿ ಮುಗಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯು ಕೈಗಾರಿಕಾ ಸಂಸ್ಥೆಗಳಲ್ಲಿ ಕನಿಷ್ಠ ಒಂದು ವರ್ಷ ತರಬೇತಿ ಪಡೆಯಬೇಕು ಎಂಬುದರ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲಿದೆ. ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ ದೇಶಗಳು ಅಲ್ಲಿನ ನಾಲ್ಕು ಸಾವಿರ ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳುಹಿಸಿ ಉನ್ನತ ಶಿಕ್ಷಣ ಕೊಡಿಸಲು ಉದ್ದೇಶಿಸಿದೆ. ಅದರಂತೆ ಇಲ್ಲಿನ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಶಿಕ್ಷಣ ಕಲಿಯುವ ಬಗ್ಗೆ ಮಾತುಕತೆ ನಡೆಸಲು ಜನವರಿ 16 ರಂದು ಇಂಗ್ಲೆಂಡ್ಗೆ ತೆರಳುತ್ತಿರುವುದಾಗಿ ಅವರು ತಿಳಿಸಿದರು.
Advertisement