ರಾಮನಗರ: ಕಟ್ಟಡ ನಿರ್ಮಾಣ ಕಾರ್ಮಿಕರು ತಮಗೆಂದೇ ರೂಪಿತವಾಗಿರುವ ಕಾನೂನುಗಳ ಅರಿವು ಪಡೆದುಕೊಂಡು, ಅವುಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಯೋಟ ಟೆಕ್ನೋಪಾರ್ಕ್ನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಸಂಘಟಿತ ಕಾರ್ಮಿಕರು ಮಾಲೀಕರು ಇಲ್ಲವೇ ಕಾರ್ಖಾನೆಗಳಿಂದ ಶೋಷಣೆಗೊಳಗಾಗುವುದನ್ನು ತಪ್ಪಿಸಲು ಸರ್ಕಾರವು ಹಲವಾರು ಕಾನೂನುಗಳನ್ನು ರೂಪಿಸಿದೆ. ಯಾವುದೇ ಕಾರ್ಖಾನೆಗಳು ಈ ಕಾನೂನುಗಳ ಪ್ರಕಾರವೇ ಕಾರ್ಮಿಕರನ್ನು ದುಡಿಸಿಕೊಳ್ಳಬೇಕು ಎಂದರು.
ಗುರುತಿನ ಚೀಟಿ: ಕಟ್ಟಡ ನಿರ್ಮಾಣ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳು ಈ ಗುರುತಿನ ಚೀಟಿ ನೀಡುವರು. ಕಾರ್ಮಿಕರು ಗುರುತಿನ ಚೀಟಿ ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಜತೆಗೆ ತಮ್ಮ ಸ್ನೇಹಿತರಿಗೂ ಈ ಬಗ್ಗೆ ತಿಳಿಸಬೇಕು ಎಂದು ನ್ಯಾಯಾಧೀಶ ಪ್ರಹ್ಲಾದ್ ತಿಳಿಸಿದರು.
ಒಂದು ಕಟ್ಟಡ ನಿರ್ಮಿಸಬೇಕಾದರೆ ಸಾವಿರಾರು ಕಾರ್ಮಿಕರ ಶ್ರಮ ಅಗತ್ಯ. ಕಟ್ಟಡ ನಿರ್ಮಾಣ ವೇಳೆ ಸಂಭವಿಸುವ ಅಪಘಾತಗಳಲ್ಲಿ ಹಲವಾರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ ವಿಕಲಾಂಗರಾಗಿರುವ ಉದಾಹರಣೆಗಳಿವೆ.
ಇಂತಹ ಸಂದರ್ಭದಲ್ಲಿ ಸರ್ಕಾರವು ಕಾರ್ಮಿಕರ ಸಹಾಯಕ್ಕೆ ಧಾವಿಸಲಿದೆ ಎಂದು ಜಿಲ್ಲಾ ಕಾರ್ಮಿಕಾಧಿಕಾರಿ ಎಂ.ನಾಗರಾಜು ಹೇಳಿದರು.
ನಿರ್ಮಾಣವಾದ ಕಟ್ಟಡದಿಂದ ಕಾರ್ಮಿಕ ಕಲ್ಯಾಣ ಮಂಡಳಿಯು ತೆರಿಗೆ ವಸೂಲು ಮಾಡುತ್ತದೆ. ಸದ್ಯ ಮಂಡಳಿಯಲ್ಲಿ ರು.2400 ಕೋಟಿ ಹಾಗೂ ಜಿಲ್ಲೆಯಲ್ಲಿ ರು.3.5 ಕೋಟಿ ಹಣ ಇದೆ. ಈ ಹಣವನ್ನು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ. ಆದರೆ, ಕಾರ್ಮಿಕರು ಮಾಹಿತಿ ಕೊರತೆಯಿಂದ ಈ ಸೌಲಭ್ಯ ಬಳಸಿಕೊಳ್ಳದ ಕಾರಣ ರು.2400 ಕೋಟಿ ಹಣ ಸದ್ಬಳಕೆಯಾಗುತ್ತಿಲ್ಲ ಎಂದು ವಿಷಾದಿಸಿದರು.
ಒಟ್ಟು ಕಾರ್ಮಿಕರ ಪೈಕಿ ಶೇ.90ರಷ್ಟು ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದಾರೆ. ಕಟ್ಟಡ ನಿರ್ಮಾಣ, ಗಾರ್ಮೆಂಟ್ಸ್, ಮನೆಗೆಲಸ, ಕಲ್ಲುಗಣಿ, ಇಟ್ಟಿಗೆ ಕಾರ್ಖಾನೆಗಳು, ಫಿಲೇಚರ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದು, ಈ ಕಾರ್ಮಿಕರು ಯೋಜನೆ ಸೌಲಭ್ಯ ಪಡೆಯಲು ಅರ್ಹರು ಎಂದು ನಾಗರಾಜು ತಿಳಿಸಿದರು.
ಜಿಲ್ಲೆಯಾದ್ಯಂತ ಇದುವರೆಗೆ 18 ಸಾವಿರಕ್ಕೂ ಹೆಚ್ಚು ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಕಟ್ಟಡ ನಿರ್ಮಾಣ ವೇಳೆ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟ ಇಲ್ಲವೇ ಗಾಯಗೊಂಡ ಕಾರ್ಮಿಕರಿಗೆ ರು.30ಲಕ್ಷಕ್ಕೂ ಹೆಚ್ಚು ಪರಿಹಾರ ನೀಡಲಾಗಿದೆ ಎಂದರು.
ಹೈಕೋರ್ಟ್ ಆದೇಶದಂತೆ ಕಟ್ಟಡ ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸರ್ಕಾರ ನೀಡುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಯೋಜನೆಗಳ ಲಾಭ ಪಡೆಯಲು ಕಾನೂನು ತೊಡಕುಗಳು ಎದುರಾದ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಚ್. ಹೊಸಗೌಡರ ತಿಳಿಸಿದರು.
200ಕ್ಕೂ ಹೆಚ್ಚು ಮಂದಿಗೆ ಗುರುತಿನ ಚೀಟಿ ವಿತರಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್, ಟಯೋಟ ಟೆಕ್ನೋಪಾರ್ಕ್ ಮಾನವ ಸಂಪನ್ಮೂಲ ಅಧಿಕಾರಿ ನರಸಿಂಹ ಭಟ್, ಕೆ.ಎನ್.ಕೆ. ಸ್ವಾಮಿ ಕನ್ಸ್ಟ್ರಕ್ಷನ್ ಸಂಸ್ಥೆಯ ಪ್ರಾಜೆಕ್ ಮ್ಯಾನೇಜರ್ ಮೋಹನ್ ಕುಲಾಲ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಜಿ.ಮಹೇಶ್, ಖಜಾಂಚಿ ಟಿ.ಎಂ.ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.
Advertisement