ಬಿಜಾಪುರ: ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಯೋಗ ಗುರು ಬಾಬಾ ರಾಮದೇವ ಗುರೂಜಿ ಅವರ ಉತ್ಪನ್ನಗಳನ್ನು ಖರೀದಿಸಬಾರದು ಎಂದು ರಾಜ್ಯ ಚಲವಾದಿ ಮಹಾಸಭಾದ ಅಧ್ಯಕ್ಷ, ಬಿಜಾಪುರ ಲೋಕಸಭೆ ಜೆಡಿಎಸ್ ಅಭ್ಯರ್ಥಿ ಹಾಗೂ ಚಿತ್ರನಟ ಕೆ. ಶಿವರಾಂ ಕರೆ ನೀಡಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮದೇವ ಗುರೂಜಿ ಅವರ ಕಂಪನಿಯಲ್ಲಿ ಸಿದ್ಧಪಡಿಸುವ ವಸ್ತುಗಳನ್ನು ಖರೀದಿಸುವುದಷ್ಟೇಯಲ್ಲ. ಅವುಗಳನ್ನು ದಲಿತರು ಬಳಸಬಾರದು ಎಂದೂ ಅವರು ಹೇಳಿದರು.
ದಲಿತರಿಗೆ ಅವಹೇಳನಕಾರಿಯಾಗುವ ರೀತಿಯಲ್ಲಿ ಬಾಬಾ ರಾಮದೇವ ಗುರೂಜಿ ಅವರು ನೀಡಿದ ಹೇಳಿಕೆಯನ್ನು ಖಂಡಿಸಿ ಬುಧವಾರ ಬೆಳಗ್ಗೆ 10 ಗಂಟೆಗೆ ನಗರದಲ್ಲಿ ರಾಜ್ಯ ಚಲವಾದಿ ಮಹಾಸಭಾದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಗೆಲವು- ಸೋಲು ಮುಖ್ಯವಲ್ಲ
ಚುನಾವಣೆಯಲ್ಲಿ ಸೋಲು, ಗೆಲವು ಮುಖ್ಯವಲ್ಲ. ಜನಸೇವೆ ನನ್ನ ಗುರಿ. ಚುನಾವಣೆಯಲ್ಲಿ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಶ್ರಮಿಸಿದ್ದಾರೆ. ಗೆಲವು ಈಗಲೇ ಹೇಳಲಿಕ್ಕಾಗದು. ಗೆಲುವಾಗಲಿ, ಸೋಲಾಗಲಿ ತಾನು ಮಾತ್ರ ಜನ ಸೇವೆ ಮಾಡುವುದರಿಂದ ವಿಮುಖನಾಗುವುದಿಲ್ಲ. ಸದಾ ಜನಸೇವೆ ಮಾಡಿಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಉಳಿಯುವುದಾಗಿ ಅವರು ತಿಳಿಸಿದರು.
ದಲಿತರಲ್ಲಿ ವೃತ್ತಿ ಕೌಶಲ್ಯ ಹೆಚ್ಚಿಸಲು ಬಿಜಾಪುರದಲ್ಲಿ ಕೌಶಾಲ್ಯಾಧಾರಿತ ವೃತ್ತಿಗಳಲ್ಲಿ ತರಬೇತಿ ನೀಡಲು ತರಬೇತಿ ಕೇಂದ್ರ ತೆರೆಯಲಾಗುವುದು. ಚಲವಾದಿ ಮಹಾಸಭಾದ ಸಮುದಾಯ ಭವನ ನಿರ್ಮಿಸಲಾಗುವುದು ಎಂದರು. ಬಿಜಾಪುರ ಜಿಲ್ಲಾ ಚಲವಾದಿ ಮಹಾಸಭಾದ ಅಧ್ಯಕ್ಷ, ನ್ಯಾಯವಾದಿ ಕೆ. ಬಸಣ್ಣ ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ ಕಾರಣಕ್ಕಾಗಿ ಅವರನ್ನು ಬದಲಿಸುವ ವಿಚಾರವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ತಾನಲ್ಲ. ತನಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸುವಂತೆ ಪಕ್ಷದ ವರಿಷ್ಠರು ಕೇಳಿಕೊಂಡರೂ ಅದಕ್ಕೆ ತಾವು ಒಪ್ಪುವುದಿಲ್ಲ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ಜನಸೇವೆ ಮಾಡಲು ಹುದ್ದೆ ಮುಖ್ಯವಲ್ಲ ಎಂದು ಅವರು ತಿಳಿಸಿದರು.
Advertisement