ಕನ್ನಡಪ್ರಭ ವಾರ್ತೆ, ಚಾಮರಾಜನಗರ, ಆ. 6
ಪ್ರತಿಯೊಂದು ಗ್ರಾಮ ಪಂಚಾಯತ್ ಕೇಂದ್ರ ಸ್ಧಾನದಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಪಿಎಸಿಸಿ) ಸ್ಥಾಪನೆ ಮಾಡುವಂತೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ 120 ಗ್ರಾಪಂಗಳಿದ್ದು, 82 ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಈ ನಿಟ್ಟಿನಲ್ಲಿ ಉಳಿದ ಗ್ರಾಪಂ ಕೇಂದ್ರಗಳಲ್ಲೂ ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.ಸಂಘಗಳ ವ್ಯಾಪ್ತಿಯ ಜಮೀನುಳ್ಳ ರೈತರನ್ನೆಲ್ಲಾ ಸದಸ್ಯರನ್ನಾಗಿ ಮಾಡಿಕೊಂಡು ಅವರೆಲ್ಲರಿಗೂ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಮಾಡಿಕೊಳ್ಳಲು ಮಾಡಿಕೊಡುವಂತೆಯೂ ಸಚಿವರು ತಾಕೀತು ಮಾಡಿದರು.
ಕಳೆದ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ರು. 44 ಕೋಟಿ ಸಾಲ ನೀಡಲಾಗಿತ್ತು. ಈ ಬಾರಿ ಈಗಾಗಲೇ ಕೃಷಿ ಮತ್ತು ಕೃಷಿಯೇತರ 94 ಕೋಟಿ ಸಾಲ ನೀಡಲಾಗಿದ್ದು, ಇನ್ನೂ 60 ಕೋಟಿ ರು. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದರು. ಜಿಲ್ಲೆಯಲ್ಲಿ ಕೃಷಿ ಉದ್ದೇಶಕ್ಕಾಗಿ 14. 97 ಕೋಟಿ ರು. ಸಾಲ ನೀಡಲಾಗಿದ್ದು, ಈ ಪೈಕಿ ಪರಿಶಿಷ್ಟ ಜಾತಿಯ 381 ಪಲಾನುಭವಿಗಳಿಗೆ ರು.1.31 ಕೋಟಿ ಸಾಲ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಹಾಗೂ ಶೇ.25ರಷ್ಟು ಹೊಸಬರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲ್ಲಂಬಳ್ಳಿ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಒಂದು ಕಡೆಯಿಂದ ಈಗಾಗಲೇ ನೀಡಲಾಗಿರುವ ಕಾಲಮಿತಿಯೊಳಗೆ ಅಭಿವೃದ್ಧಿಪಡಿಸಿ ಕೈಗಾರಿಕೋದ್ಯಮಿಗಳಿಗೆ ನೀಡಲು ಅನುಕೂಲ ಕಲ್ಪಿಸಿ. ಸ್ವಾಧೀನ ಪಡಿಸಿಕೊಂಡ ಪ್ರದೇಶದಲ್ಲಿರುವ ಸರ್ಕಾರಿ ಭೂಮಿಯನ್ನು ವಿವಿಧ ಯೋಜನೆಯಡಿ ವ್ಯಕ್ತಿಗಳಿಗೆ ಮಂಜೂರು ಮಾಡಿ ಅವರು ವ್ಯವಸಾಯ ಮಾಡದಿದ್ದರೆ ಅದನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಿ ಎಂದರು.
ತನಿಖೆ ಮಾಡಿ ವರದಿ ಕೊಡಿ: ಸಾಮಾಜಿಕ ಅರಣ್ಯ ಇಲಾಖೆ ಮೂಲಕ ಜಿಲ್ಲೆಯ ವಿವಿಧೆಡೆ ಸಸಿ ಹಾಕಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಪಂ ಕೃಷಿ ಸಾಮಾಜಿಕ ಸ್ಧಾಯಿ ಸಮಿತಿ ಅಧ್ಯಕ್ಷ ಕೊಪ್ಪಾಳಿ ಮಹದೇವನಾಯಕ ಅವರಿಗೆ ಸೂಚನೆ ನೀಡಿದರು. ಸಾಮಾಜಿಕ ಅರಣ್ಯ ಇಲಾಖೆ ಕೈಗೊಂಡಿರುವ ಸಸಿ ನಡುವ ಕಾರ್ಯಕ್ರಮದ ಬಗ್ಗೆ ಶಾಸಕ ನರೇಂದ್ರ ಆಕ್ಷೇಪ ವ್ಯಕ್ತಪಡಿಸಿದರು, ಇದಕ್ಕೆ ಸಾಮಾಜಿಕ ಸ್ಧಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು ಧ್ವನಿಗೂಡಿಸಿ, ನಮಗೆ ಇದುವರಗೆ ಇಲಾಖೆ ವತಿಯಿಂದ ಕೈಗೊಂಡ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿಲ್ಲ. ಹಲವು ಬಾರಿ ಸ್ಥಳ ಪರಿಶೀಲನೆ ಮಾಡಲು ಕರೆದುಕೊಂಡು ಹೋಗುವುದಾಗಿ ತಿಳಿಸಿ ನಮ್ಮನ್ನು ಕಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮನ್ನು ಅವರು ಕಾಯಿಸುವುದರಲ್ಲಿ ಅರ್ಥವಿಲ್ಲ, ನೀವೇ ಅವರನ್ನು ಕರೆದುಕೊಂಡು ಪರಿಶೀಲನೆ ನಡೆಸಬೇಕು. ಅಷ್ಟರ ಮಟ್ಟಿಗೆ ಜಿಲ್ಲಾ ಪಂಚಾಯಿತಿ ಸದಸ್ಯರು ಸಮರ್ಥರಾಗಿರಬೇಕು ಎಂದು ಉಸ್ತವಾರಿ ಸಚಿವರು ತಿಳಿಸಿದರು.
ಪರ್ಯಾಯ ಬೆಳೆಗೆ ಸಿದ್ಧತೆ ಮಾಡಿಕೊಳ್ಳಿ: ಹನೂರು ಶಾಸಕ ನರೇಂದ್ರ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ವಿಫಲವಾಗಿರುವುದರಿಂದ ಜಿಲ್ಲೆಯ ರೈತರು ಹಿಂಗಾರಿನಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಈಗಿನಿಂದಲೇ ಸೂಕ್ತ ಮಾಹಿತಿ ನೀಡುವ ಮೂಲಕ ಹಿಂಗಾರಿನಲ್ಲಿ ಬೆಳೆಯಬಹುದಾದ ಮುಸುಕಿನ ಜೋಳ, ರಾಗಿ, ಹುರುಳಿ ಬಿತ್ತನೆ ಬೀಜವನ್ನು ಸಂಗ್ರಹಿಸಿ, ಬಿತ್ತನೆಗಾಗಿ ಕಾಲುವೆಗಳಿಗೆ ನೀರು ಬಿಟ್ಟಿರುವುದರಿಂದ ರೈತರು ಜ್ಯೋತಿ ಭತ್ತದ ತಳಿ ಬಿತ್ತನೆ ಬೀಜ ಕೇಳುತ್ತಿರುವುದರಿಂದ ಅವರಿಗೆ ಬೇಕಾದ ಬಿತ್ತನೆ ಬೀಜ ಸರಬರಾಜು ಮಾಡಿ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ದೇವರಾಜು ಅವರಿಗೆ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆ ತೆಂಗು ಹಾಳಾಗಿರುವುದರಿಂದ ಅಲ್ಪಾವಧಿ ಬೆಳೆ ಬೆಳೆಯಲು ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿ ತೋಟ ಗಳಿಗೆ ಇಲಾಖೆಯಿಂದಲೇ ನರ್ಸರಿ ಆರಂಭಿಸಿ, ಹಣ್ಣು ಮತ್ತು ತರಕಾರಿ ಸಸಿಗಳನ್ನು ಬೆಳಸಿ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಣೆ ಮಾಡಿ ಎಂದು ತೋಟಗಾರಿ ಉಪನಿರ್ದೇಶಕ ಸಂಜಯ್ ಅವರಿಗೆ ಸೂಚಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಜಿಪಂ ಅಧ್ಯಕ್ಷ ಡಿ.ಸಿ. ನಾಗೇಂದ್ರ, ಉಪಾಧ್ಯಕ್ಷೆ ಕೇತಮ್ಮ, ಜಿಪಂ ಸಿಇಒ ಡಾ.ಕೆ.ಎಚ್. ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಎಎಸ್ಪಿ ವೆಂಕಟನಾಯಕ್ ಇತರರು ಇದ್ದರು.
ತಡವಾಗಿ ಬಂದ ಶಾಸಕ, ಜಿಪಂ
ಉಪಾಧ್ಯಕ್ಷರಿಗೆ ತಣ್ಣನೆ ತರಾಟೆ
ಓ... ಭಾರತೀಯ ಕಾಲಮಾನದ ಪ್ರಕಾರ ಸಭೆಗೆ ಬಂದಿದ್ದೀರಾ... ಏಕಮ್ಮ ಸಭೆಗೆ ತಡವಾಗಿ ಬಂದಿರಿ.. ಎಂದು ಸಚಿವ ಮಹದೇವಪ್ರಸಾದ್ ಶಾಸಕ ಮತ್ತು ಜಿಪಂ ಉಪಾಧ್ಯಕ್ಷರನ್ನು ಹಾಸ್ಯ ಮಾಡುತ್ತಲೇ ಕುಟುಕಿದರು. ಕೊಳ್ಳೇಗಾಲ ಶಾಸಕ ಜಯಣ್ಣ ಅರ್ಧ ಗಂಟೆ ತಡವಾಗಿ ಆಗಮಿಸಿದರು. ಆಗ ಸಚಿವ ಮಹದೇವಪ್ರಸಾದ್, ಓ ಭಾರತೀಯ ಕಾಲಮಾನದ ಪ್ರಕಾರ ಸಭೆಗೆ ಬಂದಿದ್ದೀರಾ ಅಥವಾ ಅಧಿಕಾರಿಗಳೇ ನಿಮಗೆ ಅರ್ಧ ಗಂಟೆ ತಡವಾಗಿ ಬನ್ನಿ ಎಂದು ನೋಟಿಸ್ ಕಳುಹಿಸಿರಬಹುದೇ ಎಂದು ಹಾಸ್ಯ ಮಾಡಿದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿದೆ ಜಯಣ್ಣ ಸುಮ್ಮನೆ ಕುಳಿತರು. ಮಧ್ಯಾಹ್ನದ ಊಟದ ವೇಳೆಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರನ್ನು ಕರೆದುಕೊಂಡು ಮದುವೆಗೆ ಹೋಗಬೇಕು ಎಂದು ಸಭೆಯಿಂದ ಹೊರ ನಡೆದರು. ಇನ್ನೂ ಸಭೆಗೆ ಒಂದು ಗಂಟೆ ತಡವಾಗಿ ಬಂದ ಜಿಪಂ ಉಪಾಧ್ಯಕ್ಷೆ ಕೇತಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು ಮತ್ತು ಕೃಷಿ ಸ್ಧಾಯಿ ಸಮಿತಿ ಅಧ್ಯಕ್ಷ ಕೊಪ್ಪಾಳಿ ಮಹದೇವನಾಯಕ ಅವರನ್ನು ತಡವಾಗಿ ಬಂದಿದ್ದಕ್ಕೆ ತರಾಟೆಗೆ ತೆಗೆದುಕೊಂಡರು. ಏಕಮ್ಮಾ ತಡವಾಗಿ ಸಭೆಗೆ ಬಂದಿದ್ದೀಯಾ ಸಭೆ 10.30ಕ್ಕೆ ಇರುವುದು ಗೊತ್ತಿಲ್ಲವೇ ಎಂದು ಜಿಪಂ ಉಪಾಧ್ಯಕ್ಷೆಯನ್ನು ಪ್ರಶ್ನಿಸಿದರು.
ಕೊಳವೆ ಬಾವಿ ಕೊರೆಸುವ ಮುನ್ನ
ಜಿಲ್ಲಾಡಳಿತ ಗಮನಕ್ಕೆ ತರಬೇಕು
ರಾಜ್ಯದಲ್ಲಿ ತೆರೆದ ಕೊಳವೆ ಬಾವಿಗಳಿಂದ ನಿರಂತರವಾಗಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸುವವರು ಬಾವಿ ಕೊರೆಸುವ ಮುನ್ನ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ತಿಳಿಸಿದರು.ಈ ಸಂಬಂಧ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿಫಲಗೊಂಡಿರುವ ತೆರೆದ ಕೊಳವೆ ಬಾವಿ ಮುಚ್ಚುವ ಕಾರ್ಯಾಚರಣೆಗೆ ಮುಂದಾಗಬೇಕು. ಈ ವಿಷಯವನ್ನು ಪ್ರತಿ ಗ್ರಾಮದಲ್ಲೂ ಪ್ರಚಾರ ಪಡಿಸಬೇಕು. ಅನುಪಯುಕ್ತ ಕೊಳವೆ ಬಾವಿಗಳ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ತಿಳಿಸಬೇಕು ಎಂದರು. ಶಿಥಿಲದೊಂಡಿರುವ ಓವರ್ಹೆಡ್ ಟ್ಯಾಂಕ್ಗಳನ್ನು ನೆಲಸಮಗೊಳಿಸಬೇಕು. ಅಲ್ಲದೆ, ಎಂದು ತಿಳಿಸಿದರು. ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಯಾವುದೇ ಕಾರಣಕ್ಕೂ ಶಿಥಿಲಗೊಂಡಿರುವ ಕಟ್ಟಡಗಳಲ್ಲಿ ಶಾಲೆಗಳನ್ನು ನಡೆಸಬಾರದು. ಸಾಲೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ರತಿ ಶಾಲೆಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳ ಸಂಖ್ಯೆಗನುಗುಣವಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಮಕ್ಕಳಿಗೆ ಕೈ ತೊಳೆಯಲು ಸಮರ್ಪಕ ನಲ್ಲಿಗಳನ್ನು ಅಳವಡಿಸಬೇಕು ಮತ್ತು ಸೈಕಲ್ ಸ್ಟ್ಯಾಂಡ್ ನಿರ್ಮಾಣ ಮಾಡಬೇಕು ಎಂದು ನಿರ್ದೇಶನ ನೀಡಿದರು.
Advertisement