ಚಾಮರಾಜನಗರ: 2011ನೇ ಸಾಲಿನಲ್ಲಿ ಕೆಎಎಸ್ ಪರೀಕ್ಷೆ ಮೂಲಕ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರ ಷರತ್ತುಬದ್ಧ ನೇಮಕ ಆದೇಶವನ್ನು ನೀಡಬೇಕೆಂದು ಒತ್ತಾಯಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಪ್ರಗತಿಪರ ಸಂಘಟನೆಗಳೊಡಗೂಡಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ರಾಜ್ಯ ಉಚ್ಛ ನ್ಯಾಯಾಲಯಗಳ ತೀರ್ಪಿಗೊಳಪಟ್ಟು ಷರತ್ತು ಬದ್ಧ ನೇಮಕಾತಿ ಆದೇಶವನ್ನು ನೀಡಬೇಕೆಂದು ಘೋಷಣೆಗಳನ್ನು ಕೂಗುತ್ತಾ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಾವಂತರಿಗೆ ಅನ್ಯಾಯ: ಮಾತನಾಡಿದ ಪ್ರತಿಭಟನಾಕಾರರು, ಲೋಕಸೇವಾ ಆಯೋಗವ ಮರು ಮೌಲ್ಯಮಾಪನ ಮರು ಸಂದರ್ಶನವನ್ನು ನಡೆಸಲು ನಿರಾಕರಿಸಿರುವ ಬೆನ್ನಲ್ಲೇ ಸರ್ಕಾರ ಇಡೀ ಅಧಿಸೂಚನೆ ಹಿಂದಕ್ಕೆ ಪಡೆಯಲು ಹೊರಟಿರುವುದು ಪ್ರತಿಭಾವಂತರಿಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದರು.
ಸಿಐಡಿ ವರದಿಯಲ್ಲಿರುವ ತಪ್ಪಿತಸ್ಥರನ್ನು ಆಯ್ದು ಅವರಿಗೆ ತಕ್ಕ ಶಿಕ್ಷೆಯನ್ನು ನೀಡಿ, ಅದು ಬಿಟ್ಟು ಇಡೀ ಅಧಿಸೂಚನೆ ಹಿಂದಕ್ಕೆ ಪಡೆಯಲು ಹೊರಟಿರುವುದು ಹಿಂದುಳಿದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ, ಯಾರೋ ಮಾಡಿದ ತಪ್ಪಿಗೆ ಅಮಾಯಕ ಪ್ರಾಮಾಣಿಕ ಅಭ್ಯರ್ಥಿಗಳನ್ನು ಬಲಿಕೊಡುವುದು ಸರಿಯಲ್ಲ ಎಂದರು.ಆಯ್ಕೆಯಾದ ಎಲ್ಲರೂ ಅಕ್ರಮದಿಂದಲೇ ಆಯ್ಕೆಯಾಗಿರುವುದಿಲ್ಲ, ಕಷ್ಟಪಟ್ಟು ಓದಿ, ಆಯ್ಕೆಯಾಗಿ ಹುದ್ದೆಗಾಗಿ ಕಾಯುತ್ತಿರುವ ಬಡ ಪ್ರತಿಭಾವಂತರ ಬಗ್ಗೆಯು ಸರ್ಕಾರ ಯೋಚಿಸಬೇಕು, ಪ್ರಸ್ತುತ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಆರ್ಹ ಪ್ರತಿಭಾವಂತ ಅಭ್ಯರ್ಥಿಗಳ ಹಿತಕಾಯುವ ದೃಷ್ಟಿಯಿಂದ ಕೆಎಎಸ್-2011ರ ಅಂತಿಮ ಆಯ್ಕೆ ಪಟ್ಟಿಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿರುವುದು ಸ್ವಾಗತಾರ್ಹ ಎಂದರು.
ತಕ್ಷಣ ಕ್ರಮ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರ ಷರತ್ತುಬದ್ದ ನೇಮಕಾತಿ ಆದೇಶವನ್ನು ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.ಎಸ್ಡಿಪಿಐ ಜಿಲ್ಲಾಧ್ಯಕ್ಷ ಸೈಯದ್ ಅರಿಫ್, ಪ್ರಧಾನ ಕಾರ್ಯದರ್ಶಿ ಅಬ್ರಹಾರ್ ಅಹ್ಮದ್, ಇರ್ಷಾದ್ ಅಹ್ಮದ್, ದೊಡ್ಡಿಂದುವಾಡಿ ಸಿದ್ದರಾಜು, ಆಲೂರು ನಾಗೇಂದ್ರ, ನಗರಸಭಾ ಸದಸ್ಯ ಮಹೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.
Advertisement