'ಏಡ್ಸ್ ಬಗ್ಗೆ ಜಾಗೃತಿ ಅಗತ್ಯ'
ಕ.ಪ್ರ.ವಾರ್ತೆ ಚಿಕ್ಕಮಗಳೂರು ಡಿ.10
ಜಾಗತಿಕ ಸಾಂಕ್ರಾಮಿಕ ರೋಗ ಏಡ್ಸ್ಗೆ ಕಳಂಕ ಅಂಟಿದ್ದು, ದೇಹದ ಪ್ರತಿರೋಧಕ ಶಕ್ತಿ ಕುಗ್ಗಿಸುವ ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲದಿರುವುದರಿಂದ ಭಯಾನಕ. ಈ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಂಪನ್ಮೂಲ ತಜ್ಞ ಜೆಲ್ಲಿ ಕೆ. ಜಾರ್ಜ್ ಹೇಳಿದ್ದಾರೆ.
ನಗರದ ಮೌಂಟೆನ್ ವ್ಯೂ ಪದವಿಪೂರ್ವ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಆಯೋಜಿಸಿದ್ದ ಎಚ್ಐವಿ- ಏಡ್ಸ್ ಜಾಗೃತಿ ಕಾರ್ಯಾಗಾರದಲ್ಲಿ ಮಂಗಳವಾರ ಅವರು ಪವರ್ ಪಾಯಿಂಟ್ನೊಂದಿಗೆ ಉಪನ್ಯಾಸ ನೀಡಿ ಸಂವಾದಿಸಿದರು.
ಏಡ್ಸ್ ಒಂದು ಭಯಾನಕ ರೋಗ. ನಮ್ಮ ಜೀವನದಲ್ಲಿ ನೈತಿಕತೆ ಇಲ್ಲದಿದ್ದರೆ ಇದು ಬರುತ್ತದೆ. ಕಳಂಕದ ಸೋಂಕು ಇದೆ. ದೇಹದ ಪ್ರತಿರೋಧಶಕ್ತಿ ಕಡಿಮೆ ಮಾಡುವ ರೋಗವಿದು. ಇದಕ್ಕೆ ಶಾಶ್ವತ ಚಿಕಿತ್ಸೆ ವ್ಯಾಕ್ಸಿನ್ ಈ ವರೆಗೂ ಕಂಡು ಹಿಡಿಯಲಾಗಿಲ್ಲ. ನಿತ್ಯ 14 ಸಾವಿರ ಜನ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲಿ 5 ಸಾವಿರ ಜನರ ವಯೋವುತಿ 15 ವರ್ಷ ಆಸುಪಾಸಿನದೆಂಬುದು ಆತಂಕದ ಸಂಗತಿ. ಇದಕ್ಕಾಗಿಯೇ ರಾಜ್ಯ ಆರೋಗ್ಯ ಇಲಾಖೆ ಮಾರ್ಗದರ್ಶನದಲ್ಲಿ ರೆಡ್ ರಿಬ್ಬನ್ ಕ್ಲಬ್ಗಳ ಮೂಲಕ ಶಾಲಾ- ಕಾಲೇಜುಗಳಲ್ಲಿ ಹದಿ ವಯಸ್ಸಿನ ಯುವ ಜನತೆಗೆ ಅರಿವು ಮೂಡಿಸುವ ತಪ್ಪು ಅಭಿಪ್ರಾಯಗಳನ್ನು ದೂರಮಾಡುವ, ಎಚ್ಚರಿಕೆ ಸಂದೇಶ ನೀಡುವ ಕಾರ್ಯಾಗಾರ ನಡೆಸುತ್ತಿದೆ ಎಂದರು.
ಪ್ರಾಂಶುಪಾಲೆ ತಸ್ನೀಮ್ ಫಾತೀಮಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಹದಿವಯಸ್ಸಿನ ಬದಲಾವಣೆ ಹಾಗೂ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದರಿಂದ ಮುಂದಿನ ಅನಾಹುತಗಳನ್ನು ತಪ್ಪಿಸಬಹುದೆಂದರು.
ಏಡ್ಸ್ ವಿರೋಧಿ ಘೋಷಣೆ, ಭಿತ್ತಿಪತ್ರ ರಚನೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಬಹುಮಾನ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕ ಎಚ್.ಪಿ. ರಘು ಪ್ರಾಸ್ತಾವಿಸಿ, ರಾಜ್ಯದ 24 ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ಆರಂಭಿಸಿದ್ದು, ಅದರಲ್ಲಿ ಮೌಂಟೆನ್ ವ್ಯೂ ಒಂದಾಗಿದೆ. ಆಧುನಿಕತೆಯ ತಾಂತ್ರಿಕ, ವೈಜ್ಞಾನಿಕ ಆವಿಷ್ಕಾರದ ನಡುವೆಯೂ ಆರೋಗ್ಯಪಾಲನೆಗೆ ಆದ್ಯತೆ ನೀಡುವ ಯೋಜನೆ ಇದು ಎಂದರು. ಉಪನ್ಯಾಸಕರಾದ ವಿವೇಕಪ್ರಭು, ಆಯೇಷಾ, ಸುಜಾತ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ