ಕಪ್ರ ವಾರ್ತೆ, ಚಿಕ್ಕಮಗಳೂರು
ಸಾಹಿತ್ಯ ರಚನೆಯಂತೆಯೇ ವಿಮರ್ಶೆಯೂ ಚಿಂತನ ಶಕ್ತಿಯನ್ನು ಹೆಚ್ಚಿಸುತ್ತದೆ. ಕವಿಯ ಮನೋಭಾವವನ್ನು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡುವ ಶಕ್ತಿ ವಿಮರ್ಶೆಗೆ ಇದೆ ಎಂದು ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ.
ನಗರದ ಕುವೆಂಪು ಕಲಾ ಮಂದಿರದಲ್ಲಿ ಉದ್ಭವ ಪ್ರಕಾಶನ, ಜಿ. ಭೀಮೇಶ್ವರ ಜೋಷಿ ಅಭಿನಂದನ ಸಮಿತಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಳವಾಡಿ ಮಂಜುನಾಥ್ ವಿರಚಿತ ಭಾಮಿನಿ ಭಾಸ್ಕರ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಮಗ್ರ ಅಧ್ಯಯನ: ಇದೊಂದು ಅಪರೂಪದ ಗ್ರಂಥವಾಗಿದ್ದು, ಆಧುನಿಕ ಕವಿಯೊಬ್ಬ ರಚಿಸಿದ ಹನ್ನೊಂದು ಭಾಮಿನಿ ಕಾವ್ಯಗಳ ಸಮಗ್ರ ಅಧ್ಯಯನವಾಗಿದೆ. ಕವಿಯ ಸೃಷ್ಟಿ ಕಾರ್ಯವನ್ನು ಮಂಜುನಾಥ್ ಅನುಸೃಷ್ಟಿಯ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ ಎಂದರು.
ಕನ್ನಡ ಸಾಹಿತ್ಯದಲ್ಲಿ ಭಾಮಿನಿ ಕಾವ್ಯಕ್ಕೆ ದೊಡ್ಡ ಇತಿಹಾಸವಿದೆ. ಸುಮಾರು ಇನ್ನೂರು ಕಾವ್ಯಗಳು ಭಾಮಿನಿ ಛೆಂದಸ್ಸಿನಲ್ಲಿ ರಚನೆಯಾಗಿವೆ. 17ನೇ ಶತಮಾನದಲ್ಲಿದ್ದ ಸಾಗರವರ್ಣಿ ಎಂಬ ಕವಿ ಆರು ಭಾಮಿನಿ ಕಾವ್ಯಗಳನ್ನು ರಚಿಸಿದ್ದ, ಸತ್ಯವಿಠಲ ಅವರು ಹನ್ನೊಂದು ಭಾಮಿನಿ ಕೃತಿಗಳನ್ನು ರಚಿಸುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಸತ್ಯವಿಠಲ ಅವರು ಗಮನಿಸದ ಅನೇಕ ಸೂಕ್ಷ್ಮ ಅಂಶಗಳನ್ನು ಬೆಳವಾಡಿ ಮಂಜುನಾಥ ಅವಲೋಕಿಸಿದ್ದಾರೆ ಎಂದು ಹೇಳಿದರು.
ವಿವಿಧ ಆಯಾಮ: ಸಾಹಿತ್ಯದ ಹಿನ್ನೆಲೆ, ಯುಗಧರ್ಮ, ಸಮಗ್ರ ಅಧ್ಯಯನದ ಪರಿಕಲ್ಪನೆ, ಭಾಮಿನಿಯ ಇತಿಹಾಸ, ಭಕ್ತಿ ಕಾವ್ಯ ಹೀಗೆ ವಿವಿಧ ಆಯಾಮಗಳಲ್ಲಿ ಚಿಂತಿಸಿದ್ದಾರೆ. ಐತಿಹಾಸಿಕವಾಗಿ ಪರಾಮರ್ಶಿಸಿರುವ ಸಂಶೋಧನ ಗ್ರಂಥವಾಗಿ ಭಾಮಿನಿ ಭಾಸ್ಕರ ಮಹತ್ವ ಪಡೆದಿದೆ. ವರ್ಣನಾತ್ಮಕ ಮತ್ತು ತೌಲನಿಕ ಎಂಬ ಎರಡೂ ದೃಷ್ಟಿಯಿಂದಲೂ ವಿಮರ್ಶಿಸಿದ್ದು, ಕಾವ್ಯದ ಪ್ರಮುಖಾಂಶಗಳನ್ನು ಸವಿವರವಾಗಿ ತೆರೆದಿಟ್ಟಿರುವುದು ಈ ಕೃತಿಯ ವಿಶೇಷ ಎಂದರು.
ವಾಣಿಜ್ಯೋದ್ಯಮಿ ಡಿ.ಹೆಚ್. ನಟರಾಜ್ ಅಧ್ಯಕ್ಷತೆ ವಹಿಸಿದ್ದರು, ದಾನಿ ಗೌರಮ್ಮ ಬಸವೇಗೌಡ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಹೊರನಾಡು ಶ್ರೀ ಕ್ಷೇತ್ರದ ಭೀಮೇಶ್ವರ ಜೋಷಿ ಅವರನ್ನು ಅಭಿನಂದಿಸಲಾಯಿತು.
ಗಣೇಶ್ ಕುಮಾರ್ ಸ್ವಾಗತಿಸಿ, ಶಂಕರನಾರಾಯಣ ಭಟ್ ವಂದಿಸಿದರು. ಸಾಹಿತಿ ಬೆಳವಾಡಿ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
Advertisement