ಕ.ಪ್ರ.ವಾರ್ತೆ, ಚಿತ್ರದುರ್ಗ, ಸೆ.15
ಮಹಿಳಾ ಸಬಲೀಕರಣ ಪ್ರಮಾಣ ಹೆಚ್ಚಳವಾಗಲು ಸಾಕ್ಷರತೆಯಿಂದ ಮಾತ್ರ ಸಾಧ್ಯ ಎಂದು ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್ ಮಿಲ್ ಸಿಟಿ ಅಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ ಕರೆ ನೀಡಿದರು.
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ರೋಟರಿ ಬಾಲಭವನದಲ್ಲಿ ಮಹಿಳಾ ಸೇವಾ ಸಮಾಜದ ಓಬವ್ವ ಬಾಲಿಕಾಶ್ರಮದ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಬಡತನ ಹಾಗೂ ಇನ್ನಿತರೆ ಕಾರಣಗಳಿಂದ ಬಾಲ್ಯದಲ್ಲಿಯೇ ಶಿಕ್ಷಣದಿಂದ ಹೆಣ್ಣು ಮಕ್ಕಳು ವಂಚಿತರಾಗಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರ ಬಡವರ ಶಿಕ್ಷಣಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಜೊತೆಗೆ ಕ್ಷೀರಭಾಗ್ಯವನ್ನು ಒದಗಿಸಿದೆ. ಇಂತಹ ಸೌಲಭ್ಯಗಳನ್ನು ಪಡೆದುಕೊಂಡು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸರ್ಕಾರಿ ಬಾಲಕಿಯರ ಮಹಿಳಾ ಕಾಲೇಜಿನ ಉಪನ್ಯಾಸಕಿ ಪಿ. ಚಂದ್ರಿಕಾ ಮಾತನಾಡಿ, ಸಾಕ್ಷರತೆ ಎಂದರೆ ಕೇವಲ ಶಿಕ್ಷಣ ಪಡೆಯುವದಷ್ಟೇ ಅಲ್ಲ. ವ್ಯವಹಾರ ಜ್ಞಾನ ಪಡೆಯುವುದು ಒಂದು ಶಿಕ್ಷಣ. ಶಿಕ್ಷಣ ಸಾಮಾಜಿಕ ರಂಗಗಳಲ್ಲಿ ಮಿಳಿತವಾಗಬೇಕು. ಇಂದು ಸಾಕ್ಷರತೆ ಪ್ರಮಾಣ ವ್ಯಾಪಕವಾಗಿದೆ.
ಕಂಪ್ಯೂಟರ್ ಮತ್ತು ಕಾನೂನು ಸಾಕ್ಷರತೆ ಮುಂತಾದ ವಿಷಯಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಶಿಕ್ಷಣವಂತರಾಗುವಂತೆ ಹೇಳಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಮೀನಾಕ್ಷಿ, ತರಬೇತುದಾರ ಟಿ.ಕೆ. ನಾಗರಾಜ್, ಶೈಲಾ ರೆಡ್ಡಿ ವೇದಿಕೆಯಲ್ಲಿದ್ದರು.
Advertisement