ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ: ಎಸ್ಪಿ ಅನುಚೇತ್
ಚಿತ್ರದುರ್ಗ: ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುವುದರ ಮೂಲಕ ಅದಕ್ಕೆ ಪ್ರೋತ್ಸಾಹ ನೀಡುವ ನಮ್ಮ ಇಲಾಖೆ ಸಿಬ್ಬಂದಿ ಮೇಲೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಚಿತ್ರದುರ್ಗ ಜಿಲ್ಲಾ ನೂತನ ರಕ್ಷಣಾಧಿಕಾರಿ ಎಂ.ಎನ್. ಅನುಚೇತ್ ತಿಳಿಸಿದರು.
ಜಿಲ್ಲೆಗೆ ನೂತನ ರಕ್ಷಣಾಧಿಕಾರಿಗಳಾಗಿ ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ತಮ್ಮದು 2009 ರ ಬ್ಯಾಚ್ ಅಗಿದ್ದು, 2011 ರಲ್ಲಿ ಚಿಕ್ಕೋಡಿಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ, 2013 ರಲ್ಲಿ ಕೊಡಗಿನಲ್ಲಿ ರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಇದು ಎರಡನೇ ರಕ್ಷಣಾಧಿಕಾರಿ ಹುದ್ದೆಯಾಗಿದೆ. ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ವಿದ್ಯಾರ್ಹತೆ ಹೊಂದಿದ್ದು, ಮೂಲತಃ ಕೋಲಾರ ಜಿಲ್ಲೆಯವರು ಎಂದರು.
ರಾಜ್ಯದ ಪ್ರತಿ ಜಿಲ್ಲೆ ತನ್ನದೇ ಆದ ಮಹತ್ವ ಹೊಂದಿದೆ. ಇದರಲ್ಲಿ ಐತಿಹಾಸಿಕ ಚಿತ್ರದುರ್ಗ ವಿಶೇಷ ಮಹತ್ವ ಪಡೆದಿದೆ. ಇಲ್ಲಿನ ಸಮಸ್ಯೆ ತಿಳಿದುಕೊಳ್ಳುವುದರ ಜೊತೆಗೆ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ನಮ್ಮ ಇಲಾಖೆಯಿಂದ ಜನತೆಗೆ ಶಾಂತಿ, ಸುವ್ಯವಸ್ಥೆ ನೀಡುವುದು ಮುಖ್ಯವಾದ ಕೆಲಸವಾಗಿದೆ. ಇದಕ್ಕೆ ಜನತೆಯ ಸಹಕಾರ ಅಗತ್ಯ. ಕಾನೂನು ಬಾಹಿರ ಕೃತ್ಯ ಮಾಡುವವರೆಗೆ ಯಾವುದೇ ರೀತಿಯ ರಿಯಾಯಿತಿ ಇಲ್ಲ, ಯಾವುದೇ ಶಿಫಾರಸುಗಳಿಗೆ ಬಲಿಯಾಗದೆ ಕಾನೂನು ಕಾಪಾಡುವಲ್ಲಿ ಕಾರ್ಯ ನಿರ್ವಹಿಸುವುದಾಗಿ ಅನುಚೇತ್ ತಿಳಿಸಿದರು. ಕಾನೂನು ಬಾಹಿರ ಕೃತ್ಯಗಳಿಗೆ ಪೊಲೀಸಿನವರೇ ಬೆಂಬಲ ನೀಡುತ್ತಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಬಗ್ಗೆ ಪರಿಶೀಲನೆ ನಡೆಸಿ ಅಂತಹ ಪ್ರಕರಣಗಳು ಕಂಡು ಬಂದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ಅವರು, ಕಾನೂನು ಪರವಾಗಿ ಕೆಲಸ ಮಾಡುವವರೆಗೆ ನಮ್ಮ ಪೂರ್ಣ ಬೆಂಬಲ ದೊರೆಯಲಿದೆ. ಕಾನೂನು ಬಾಹಿರ ಕೆಲಸವನ್ನು ಮಾಡುವವರೆಗೆ ಕಡಿವಾಣ ಹಾಕುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಹೆಚ್ಚುವರಿ ರಕ್ಷಣಾಧಿಕಾರಿ ಶಾಂತಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ