ಕನ್ನಡಪ್ರಭ ವಾರ್ತೆ, ಯಾದಗಿರಿ, ಆ.29
ಹಬ್ಬಗಳು ಬದುಕಿನ ಮೌಲ್ಯಗಳನ್ನು ಒಳಗೊಂಡಿದ್ದು, ಅವುಗಳ ಸೊಗಡು ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದಾಗಿದೆ ಎಂದು ತಾಲೂಕಿನ ಸೈದಾಪುರದ ವಿದ್ಯಾವರ್ಧಕ ಡಿಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಭಿಪ್ರಾಯಪಟ್ಟರು.
ತಾಲೂಕಿನ ಕೊಂಕಲ್ ಸರ್ಕಾರಿ ಪಪೂ ಕಾಲೇಜಲ್ಲಿ ಗುರಮಠಕಲ್ ಬಸವಶ್ರೀ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ಶ್ರಾವಣ ಮಾಸದ ಸಂಭ್ರಮ ಉಪನ್ಯಾಸಕ ಮಾಲಿಕೆಯ ಸಾಂಪ್ರದಾಯಕ ಹಬ್ಬಗಳ ಮಹತ್ವ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಭಾವನಾತ್ಮಕ ಸಂಬಂಧ ನಾಶ: ಪ್ರತಿ ಹಬ್ಬವೂ ತನ್ನದೇ ಆದ ಹಿನ್ನೆಲೆ ಹೊಂದಿದೆ. ಅಲ್ಲದೆ ಅವುಗಳ ಆಚರಣೆಯಿಂದ ಜೀವನದ ಮೌಲ್ಯಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಪಾಶ್ಚಾತ್ಯರ ಜೀವನ ಶೈಲಿ ನಮ್ಮನ್ನು ಆವರಿಸಿಕೊಂಡು ಹಬ್ಬಗಳ ಮಹತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಕುಟಂಬಗಳಲ್ಲಿನ ಭಾವನಾತ್ಮಕ ಸಂಬಂಧಗಳು ನಾಶವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರತಿ ಆಚರಣೆಯೂ ಅರ್ಥಪೂರ್ಣವಾಗಿರಬೇಕು. ಬದುಕಿಗೆ ಅವುಗಳು ನೆರವು ನೀಡುವಂತಿರಬೇಕು. ಮೌಢ್ಯಗಳ ಆಚರಣೆಗಳಿಗೆ ಒಳಗಾಗಬಾರದೆಂದು ಕಿವಿಮಾತುಗಳನ್ನು ಹೇಳಿದರು.
ಯುವಕರಾಗಿದ್ದಾಗ ಉತ್ತಮ ಸಾಧನೆ ಸಾಧ್ಯ: ಸಾನ್ನಿಧ್ಯ ವಹಿಸಿದ್ದ ಅರಿಕೇರಾ ಸಿದ್ಧಾರೂಢ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಯುವಕರಾಗಿದ್ದಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಇದೊಂದು ಅಮೃತ ಗಳಿಗೆ ಇದ್ದಂತೆ. ಇದರ ಸರಿಯಾದ ಸದುಪಯೋಗ ನಾವು ಪಡೆದುಕೊಳ್ಳಬೇಕು. ಅದಕ್ಕಾಗಿ ಕ್ರಮಬದ್ಧ ಜೀವನ ಸಾಗಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ. ಸಿದ್ದಲಿಂಗರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋನಯ್ಯ ಅಧ್ಯಕ್ಷತೆ ವಹಿಸಿದ್ದರು. ಭೀಮರಾಯ, ಬಸರಡ್ಡಿ ಎಂ.ಟಿ.ಪಲ್ಲಿ, ಕೆ.ಬಿ. ರಾಘವೇಂದ್ರ, ಕಿಶೋರ, ನರೇಂದ್ರ, ಶರತ್, ನಾರಾಯಣ ಇದ್ದರು.
Advertisement