ಕನ್ನಡಪ್ರಭ ವಾರ್ತೆ, ಅರಸೀಕೆರೆ, ಆ. 6
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ಇನ್ನಿಲ್ಲದ ತೊಂದರೆಗಳು ಉಂಟಾಗುತ್ತಿದೆ. ಈ ಸಮಸ್ಯೆ ಪರಿಹಾರದ ಬಗ್ಗೆ ಪುರಸಭೆ ಆಡಳಿತ ಅಸಹಾಯಕ ರೀತಿ ಕೈಕಟ್ಟಿ ಕುಳಿತಿರುವ ಕಾರಣ ಅಮಾಯಕ ಜನರು ಹಾಗೂ ದನಗಳು ಅಪಘಾತಗಳಿಗೆ ಒಳಗಾಗಿ ಗಾಯಗೊಳ್ಳುವ ಅಥವಾ ಮರಣ ಹೊಂದುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಮಧ್ಯೆ ಹಾದುಹೋಗಿರುವ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ವೇಗವಾಗಿ ಬರುತ್ತಿದ್ದ ಅಪರಿಚಿತ ವಾಹನವೊಂದು ರಸ್ತೆ ಬದಿಯಲ್ಲಿನ ಬೀಡಾಡಿ ದನಕ್ಕೆ ಗುದ್ದಿ ಪರಾರಿಯಾಯಿತು. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಸ್ಥಳೀಯ ಪುರಸಭಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಪಘಾತದಲ್ಲಿ ಗಾಯಗೊಂಡ ಗೋವನ್ನು ಚಿಕಿತ್ಸೆಗಾಗಿ ತಾಲೂಕಿನ ಬಾಣಾವರ ಸಮೀಪದ ಮಹಾವೀರ ಗೋಶಾಲೆ ವಾಹನದಲ್ಲಿ ಕಳುಹಿಸುವ ವ್ಯವಸ್ಥೆಯನ್ನು ಮಾಡಿದರು.
ವಾಹನ ಚಾಲಕರ ಪರದಾಟ: ಪಟ್ಟಣದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ರಸ್ತೆಯ ಮಧ್ಯೆ ಭಾಗದಲ್ಲಿ ಬಿಡಾಡಿ ದನಗಳ ಗುಂಪು ಬೀಡು ಬಿಟ್ಟಿರುವ ಕಾರಣ ವಾಹನದ ಚಾಲಕರು ಹರಸಾಹಸ ಮಾಡುವ ಸ್ಥಿತಿ ಉಂಟಾಗಿದೆ.
ಇಂತಹ ಸಂದರ್ಭದಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ವಾಹನ ಸವಾರರು ಮತ್ತು ರಸ್ತೆಯಲ್ಲಿನ ಪಾದಚಾರಿಗಳು ತಮ್ಮ ಕೈ ಕಾಲು ಮುರಿದುಕೊಂಡರೇ, ಬೀಡಾಡಿ ದನಗಳ ಪ್ರಾಣಕ್ಕೇ ಸಂಚಕಾರ ಉಂಟಾದ ನಿದರ್ಶನಗಳಿವೆ.
ಈ ಸಮಸ್ಯೆ ಬಗ್ಗೆ ಅನೇಕ ಬಾರಿ ಪುರಸಭೆಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸಿದರು. ಇನ್ನಾದರೂ ಪುರಸಭಾ ಆಡಳಿತ ಎಚ್ಚೆತ್ತು ರಸ್ತೆಯಲ್ಲಿರುವ ಬೀಡಾಡಿ ದನಗಳನ್ನು ಗೋಶಾಲೆಗೆ ಸೇರಿಸುವ ಪ್ರಯತ್ನಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
ಎಚ್ಚೆತ್ತುಕೊಳ್ಳದ ಮಾಲೀಕರು
ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿ, ಅನೇಕ ಬಾರಿ ಪುರಸಭಾ ಆಡಳಿತ ಬೀದಿ ಬದಿಯಲ್ಲಿ ತಿರುಗಾಡುವ ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸುವ ಪ್ರಯತ್ನವನ್ನು ಮಾಡಿದೆ. ಆದರೂ ಕೂಡ ದನಗಳ ಮಾಲೀಕರು ಎಚ್ಚೆತ್ತುಕೊಳ್ಳದೆ ಪುನಃ ದನಗಳನ್ನು ಬೀದಿಗೆ ಬೀಡುತ್ತಿರುವ ಕಾರಣ ಅನಾಹುತಗಳು ಉಂಟಾಗುತ್ತಿದೆ. ಸದ್ಯದಲ್ಲಿಯೇ ಪುರಸಭಾ ಆಡಳಿತ ಬೀಡಾಡಿ ದನಗಳ ಸೆರೆ ಹಿಡಿಯುವ ಕಾರ್ಯವನ್ನು ಮತ್ತೆ ಕೈಗೊಳ್ಳಲಿದೆ ಎಂದರು.
Advertisement