ಶಿಗ್ಗಾಂವಿ: ನಮ್ಮ ನಾಡಿನ ಅಲೆಮಾರಿ ಜನ ಸಮುದಾಯದಲ್ಲಿರುವ ಪಾರಂಪರಿಕ ಜ್ಞಾನವನ್ನು ಪುನರುಜ್ಜೀವನಗೊಳಿಸುವ ಅಗತ್ಯ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಮುಖ್ಯಸ್ಥ ಡಾ. ಕೆ.ಎಂ. ಮೇತ್ರಿ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಾಗಂದಿಗೆ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ ಹಾಗೂ ಹಳೇದರೋಜಿಯ ಬುರ್ರಕಥಾ ಕಲಾವಿದರ ಸಂಘಗಳ ಆಶ್ರಯದಲ್ಲಿ ನಡೆದ ಜನಪದ ಕಲಾವಿದೆ ದರೋಜಿ ಈರಮ್ಮ ವಿಚಾರಗೋಷ್ಠಿ-ಸಂವಾದ ಕಾರ್ಯಕ್ರಮದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಬುಡಕಟ್ಟು ಕಾವ್ಯ ಪರಂಪರೆ ಹಾಗೂ ಈರಮ್ಮ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಸದ್ವಿನಿಯೋಗ ಮಾಡಿ: ನಾಗರಿಕ ಸಮಾಜವು ನಿರ್ಲಕ್ಷಿಸಲ್ಪಟ್ಟಿರುವ ಬುಡಕಟ್ಟು ಅಲೆಮಾರಿ ಸಮುದಾಯಗಳ ಕಲೆ, ಸಾಹಿತ್ಯವನ್ನು ಪುನರ್ ಶೋಧಿಸಿ, ಪುನರುಜ್ಜೀವನಗೊಳಿಸಬೇಕಿದೆ. ಜಾನಪದದ ಸಮೃದ್ಧ ಸಂಪತ್ತನ್ನು ಹೊಂದಿರುವ ಅಲೆಮಾರಿಗಳ ಬದುಕು ಜೀವಂತಿಕೆಯಿಂದ ಕೂಡಿದ್ದು, ಅವರ ಬದುಕಿನ ಭಾಗವಾಗಿರುವ ಪಾರಂಪರಿಕ ಜ್ಞಾನವನ್ನು ಇಂದಿನ ನಾಗರಿಕ ಸಮಾಜ ಸದ್ವಿನಿಯೋಗ ಮಾಡಿಕೊಳ್ಳಬೇಕು. ಕೃಷ್ಣಗೊಲ್ಲರ ಕಥೆ, ಕುಮಾರರಾಮನ ಕಾವ್ಯ, ಮಾರ್ವಾಡಿ ಶೇಟ್ ಕಾವ್ಯ ಇತ್ಯಾದಿ ಸಮಾಜದ ಎಲ್ಲ ವರ್ಗದ ಕಥೆಗಳನ್ನು ಸುಶ್ರಾವ್ಯವಾಗಿ ಹಾಡುವ ಹೇಳುವ ದರೋಜಿ ಈರಮ್ಮ ಅಸಹಜ, ಅಪರೂಪದ ಮೌಖಿಕ ಕಥನಪ್ರತಿಭೆ ಎಂದು ಶ್ಲಾಘಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಸಹಪ್ರಾಧ್ಯಾಪಕ ಡಾ. ಚಲುವರಾಜು ಅವರು ಬುರ್ರಕಥಾ ಕಲಾವಿದೆಯಾಗಿ ಈರಮ್ಮ ವಿಷಯ ಕುರಿತು ಉಪನ್ಯಾಸ ನೀಡಿದರು. ಜಾನಪದ ವಿಶ್ವವಿದ್ಯಾಲಯದ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಡಾ. ಕೆ. ಪ್ರೇಮಕುಮಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ಎಚ್.ಕೆ. ನಾಗೇಶ್, ಕುಪಪತಿಯವರ ಆಪ್ತಕಾರ್ಯದರ್ಶಿ ಡಾ. ಬಸಪ್ಪ ಬಂಗಾರಿ, ಸಹಾಯಕ ಪ್ರಾಧ್ಯಾಪಕ ಡಾ. ವೃಷಭಕುಮಾರ್, ಡಾ. ಭಾರತಿ ಮರವಂತೆ, ಡಾ. ಚಂದ್ರಪ್ಪ ಸೊಬಟಿ, ಡಾ. ವಿಜಯಲಕ್ಷ್ಮೀ ಗೇಟಿಯವರ್ ಅವರು ಸಂವಾದದಲ್ಲಿ ಭಾಗವಹಿಸಿ ವಿಚಾರ ಮಂಡಿಸಿದರು. ಡಾ. ಬಸಪ್ಪ ಬಂಗಾರಿ ಕಾರ್ಯಕ್ರಮ ನಿರ್ವಹಿಸಿದರು.
Advertisement