ಚಿಂತಾಮಣಿ: ಈ ಬಾರಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ದುಬಾರಿಯಾದ ಹಣ್ಣು,ಹೂವು ಖರೀದಿಸುವಲ್ಲಿ ಗ್ರಾಹಕರು ಜೇಬು ನೋಡಿಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ.ವರುಣನ ಅವಕೃಪೆಯಿಂದ ಗಗನಕ್ಕೇರಿರುವ ಹೂವು ಹಣ್ಣು ಬೆಲೆಗಳಿಂದಾಗಿ ಹಬ್ಬ ಸಂಭ್ರಮ ಆಚರಣೆಗೆ ಗ್ರಾಹಕರು ಬ್ರೇಕ್ ಹಾಕಿ ಸರಳವಾಗಿ ಹಬ್ಬ ಆಚರಿಸಲು ಮುಂದಾಗಿದ್ದಾರೆ.
ಅಸಮರ್ಪಕ ಕರೆಂಟ್: ವರಮಹಾಲಕ್ಷ್ಮಿ ಹಬ್ಬಕ್ಕೆ ಮುನ್ನ ತಾಲೂಕು ವ್ಯಾಪ್ತಿಯ ರೈತರು ಬೆಳೆದಿರುವ ಹೂವು, ಹಣ್ಣುಗಳು ಕೈ ಸೇರಿಲ್ಲ. ಕರೆಂಟ್ ಸಮರ್ಪಕವಾಗಿ ಇಲ್ಲದೆ ಇರುವುದರಿಂದ ಫಸಲು ಇಲ್ಲದೆ ರೈತರಿಗೆ ನಿರೀಕ್ಷಿಸುವ ಮಟ್ಟದಲ್ಲಿ ಕೈ ಸೇರಿಲ್ಲ. ಹಬ್ಬ ಕಳೆದರೆ ನಿರೀಕ್ಷಿತ ಪ್ರಮಾಣದಲ್ಲಿ ದರ ಸಿಕ್ಕುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆಲ್ಲವೂ ಕರೆಂಟ್ ವೈಫಲ್ಯವೇ ಕಾರಣ ಎನ್ನುವ ಆಕ್ರೋಶ ವ್ಯಕ್ತವಾಗಿದೆ.
ಗ್ರಾಹಕರ ಜೇಬಿಗೆ ಕತ್ತರಿ: ನಗರದ ಜನಬೀಡ ಪ್ರದೇಶಗಳಾದ ಐಡಿಎಸ್ಎಂಟಿ ಕಾಂಪ್ಲೆಕ್ಸ್, ಜೋಡಿರಸ್ತೆ, ಆಜಾದ್ ಚೌಕ ವೃತ್ತಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕಾಕಡ 2 ದಿನಗಳ ಹಿಂದೆ ರು. 400 ಇದ್ದದ್ದು, ಈಗ ಕೆಜಿ ರು. 800 ಆಗಿದೆ. ಕನಕಾಂಬರ ಸರಾಸರಿ ರು. 800 ರಿಂದ ರು. 1000 ಆಗಿದೆ. ಸಣ್ಣಮಲ್ಲಿಗೆ ರು. 600 ರಿಂದ 800 ಗಡಿ ದಾಟಿದೆ. ಚೆಂಡುಹೂವು ರು. 100 ರಿಂದ 120, ವಿವಿದ ಅಲಂಕಾರ ಹೂವುಗಳು ಸಹ ರು. 100 ರಿಂದ ರು. 150 ಆಗಿದೆ ಎಂದು ಹೂವಿನ ವ್ಯಾಪಾರಸ್ಥ ಪಾಂಡುರಂಗ ವಿವರಿಸಿದ್ದಾರೆ.
ಹಣ್ಣಿನ ದರ ಏರಿಕೆ: 1 ವಾರಕ್ಕಿಂತ ಈಗ ಹಣ್ಣಿನ ದರ ದುಪ್ಪಟ್ಟಾಗಿವೆ. ದಾಳಿಂಬೆ ಪ್ರತಿ ಕಿಲೋಗೆ ರು. 120 ರಿಂದ 150 ಆಗಿದೆ. ಪ್ರತಿ ಅನಾನಸ್ ಬೆಲೆ ರು. 50, ಕಪ್ಪುದ್ರಾಕ್ಷಿ ಕಿಲೋಗೆ ರು. 100 ರಿಂದ ರು. 120 ಆಗಿದೆ. ಬಾಳೆಹಣ್ಣು ಕಿಲೋಗೆ 50 ರಿಂದ ರು. 80 ಆಗಿದ್ದು, ಮೋಸಂಬಿ ಕಿಲೋಗೆ ರು. 80 ರಿಂದ 100 ಆಗಿದೆ.
Advertisement