ವ್ಯವಸಾಯೋತ್ಪನ್ನ ಮಾರಾಟ ಸಂಘಕ್ಕೆ ಆಯ್ಕೆ

Updated on

ಚಿಂತಾಮಣಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘ ನಿಯಮಿತ ಆಡಳಿತ ಸಂಘಕ್ಕೆ ಬಿ.ಎನ್.ಶ್ರೀನಿವಾಸಪ್ಪ ಆಯ್ಕೆಯಾಗಿದ್ದಾರೆಂದು ಸಹಕಾರ ಸಂಘಗಳ ಲೆಕ್ಕ ಪರಿಶೋದಕರಾದ ಹರೀಶ್ ಕುಮಾರ್ ಘೋಷಿಸಿದರು.
ನಗರದ ಎಸ್ಎಲ್ಎನ್ ಚಿತ್ರಮಂದಿರ ಬಳಿ ಇರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘಕ್ಕೆ 2011ರಿಂದ 2014-17ನೇ ಸಾಲುಗಳು ಉಳಿದ ಅವಧಿಗೆ ಸಂಘದ ಆಡಳಿತ ಮಂಡಳಿಗೆ ಬುಧವಾರ ಚುನಾವಣೆ ನಡೆಯಬೇಕಾಗಿತ್ತು. 12 ಜನರ ಸದಸ್ಯರ ಪೈಕಿ ಏಕೈಕ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ತಾಲೂಕಿನ ಬತ್ತಲಹಳ್ಳಿ ಗ್ರಾಮದ ಬಿ.ಎನ್. ಶ್ರೀನಿವಾಸಪ್ಪ ಬಿನ್ ಚಿಕ್ಕನಾರಾಯಣಪ್ಪ ಅವಿರೋಧವಾಗಿ ಆಯ್ಕೆಯಾದರೆಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧಕ ಹರೀಶ್ ಕುಮಾರ್ ತಿಳಿಸಿದರು. ಡಿಸಿಸಿ ಬ್ಯಾಂಕಿನ ನಿರ್ದೇಶಕ ಸತ್ಯನಾರಾಯಣ ಮಹೇಶ್, ನಗರಸಭಾ ಸದಸ್ಯ ಸುಜಾತಮ್ಮ ಶಿವಣ್ಣ, ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷ ನಾ. ಶಂಕರ್, ನಿರ್ದೇಶಕ ಬಿ.ಆರ್. ಪ್ರಕಾಶ ಗುಪ್ತ, ಜಿ. ರವೀಂದ್ರಗೌಡ, ಚಂದ್ರಪ್ಪ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಬಾಲಾಜಿ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಉಷಾಬಾಯಿ. ಎಂಟಿಎಪಿಎಂಸಿ ಕಾರ್ಯದರ್ಶಿ ಎನ್. ವೆಂಕಟೇಶಪ್ಪ ಇತರರು ಭಾಗವಹಿಸಿದ್ದರು.
ಕಳಪೆ ಚರಂಡಿ ಕಾಮಗಾರಿ: ಡಿಸಿಗೆ ದೂರು
ಕೋಲಾರ: ನಗರಸಭೆಗೆ ಸೇರಿದ ಗಾಂಧಿನಗರ 2ನೇ ವಾರ್ಡ್ನ 4ನೇ ಮುಖ್ಯರಸ್ತೆಯಲ್ಲಿ ಕೆಎಂಆರ್ಪಿ ಯೋಜನೆಯಡಿ ನಡೆಯುತ್ತಿರುವ ಚರಂಡಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಡಿವೈಎಫ್ಐ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಚರಂಡಿ ನಿರ್ಮಾಣಕ್ಕೆ ಬಳಸಲಾಗಿರುವ ಮರಳಿನ ಗುಣಮಟ್ಟ ಸರಿಯಿಲ್ಲ. ಪಿಲ್ಟರ್ ಮರಳು ಬಳಕೆ ಮಾಡಿರುವುದರಿಂದ ಚರಂಡಿಯ ಕೆಲವು ಕಡೆ ಈಗಲೇ ಕಿತ್ತು ಬಂದಿದೆ ಎಂದು ಮುಖಂಡರು ದೂರಿದ್ದಾರೆ. ಚರಂಡಿಯ ಕೊನೆಯ ಭಾಗದಲ್ಲಿ 100 ಮೀಟರ್ನಷ್ಟು ಉದ್ದದ ಉಪಯೋಗಿಸಿದ ಹಳೆಯ ಮತ್ತು ತಿರಸ್ಕರಿಸಿರುವ ಕಂಬಿಯನ್ನು ಬಳಸಲಾಗಿದೆ. ಈ ಕಂಬಿಯು ತುಕ್ಕು ಹಿಡಿದಿರುವುದರಿಂದ ಚರಂಡಿಯು ಬಹುಬೇಗ ಹಾಳಾಗುವ ಸಾಧ್ಯತೆಗಳಿವೆ.  ಆದ್ದರಿಂದ ಸ್ಥಳ ಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಎಂ. ವಿಜಯಕೃಷ್ಣ, ತಾಲೂಕು ಉಪಾಧ್ಯಕ್ಷರಾದ ಪಿ.ವಿ. ರಮಣ್, ಕೆ.ವಿ. ಮಂಜುನಾಥ್, ಮುಖಂಡರಾದ ಕೆ.ವಿ. ರಾಜೇಂದ್ರ ಪ್ರಸಾದ್ ಮತ್ತಿತರರು ನಿಯೋಗದಲ್ಲಿದ್ದರು.
ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಶಿಡ್ಲಘಟ್ಟ: 2014-15 ನೇ ಸಾಲಿನಲ್ಲಿ ಅಸಾಧಾರಣ ಪ್ರತಿಭೆ ತೋರಿದ ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಕೆ. ಸುಮಾ ತಿಳಿಸಿದ್ದಾರೆ. ಅರ್ಹರು ಕೊನೆಯ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸಲು ಕೋರಿದ್ದಾರೆ, ಮಾಹಿತಿಗಾಗಿ 08156-277113 ಸಂಪರ್ಕಿಸಲು ಕೋರಿದ್ದಾರೆ.
ಕ್ರೀಡಾಂಗಣ ಅಭಿವೃದ್ಧಿಗೆ ಅಭಿನಂದನೆ
ಗುಡಿಬಂಡೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಕ್ರೀಡಾಂಗಣವನ್ನು ಸುಮಾರು ರು. 20 ಲಕ್ಷ  ವೆಚ್ಚದಲ್ಲಿ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲು ಕಾರಣರಾದ ಜಿಲ್ಲಾಧಿಕಾರಿ ಆರ್. ವಿಶಾಲ್, ಮತ್ತು ತಾಲೂಕು ಆಡಳಿತ, ಹಾಗೂ ಸ್ಥಳೀಯ ಪ.ಪಂ. ಆಡಳಿತ ವರ್ಗ, ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಅವರಿಗೆ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ, ಹಾಗೂ ಶಾಲಾ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com