ಮೈಸೂರು: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಶಾಖೆಯ ವತಿಯಿಂದ ಮಂಗಳವಾರ ನಗರದ ಕೆ.ಆರ್. ವೃತ್ತದಲ್ಲಿ ಮಹಾನ್ ಮಾರ್ಕ್ಸ್ವಾದಿ ಶಿವದಾಸ್ ಘೋಷ್ ಅವರ 38ನೇ ಸಂಸ್ಮರಣ ದಿನವನ್ನು ಆಚರಿಸಲಾಯಿತು. ಶಿವದಾಸ್ ಘೋಷ್ ಅವರ ಸೂಕ್ತಿ ಪ್ರದರ್ಶನ ಮತ್ತು ಪುಸ್ತಕ ಪ್ರದರ್ಶನವನ್ನು ಎಸ್ಯುಸಿಐ ಜಿಲ್ಲಾ ಕಾರ್ಯದರ್ಶಿ ಶಶಿಧರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದು ಶೋಷಿತರ ವಿಮೋಚನೆಗಾಗಿ ಹೋರಾಡುತ್ತಿರುವ ಎಲ್ಲರೂ ಶಿವದಾಸ್ ಘೋಷ್ ಅವರ ವಿಚಾರಗಳನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ. ಆ ಮೂಲಕ ಮಾತ್ರ ಜಾಗತಿಕವಾಗಿ ಹಿನ್ನಡೆಯಾಗಿರುವ ಸಮಾಜವಾದಿ ಚಳವಳಿಗೆ ಮರುಜೀವ ತುಂಬಲು ಸಾಧ್ಯ. ಈ ವಿಚಾರಗಳನ್ನು ಜನರಲ್ಲಿ ಪ್ರಚಾರ ಮಾಡುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಎಂ ವಿರುದ್ಧ ಕಪ್ಪುಬಾವುಟ ಪ್ರದರ್ಶನ ಇಂದು
ಮೈಸೂರು: ರೈತರ ಸಮಸ್ಯೆಗಳನ್ನು ಬಗೆಹರಿಸದಿರುವ ಸರ್ಕಾರದ ಧೋರಣೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ಆ.6 ರಂದು ಬನ್ನೂರಿನಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ತಿಳಿಸಿದ್ದಾರೆ. ಒಂದು ತಿಂಗಳಿಂದ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಬನ್ನೂರು ಭಾಗದಲ್ಲಿರುವ ವಿ.ಸಿ. ನಾಲಾ ಹಾಗೂ ಸಿಡಿಎಸ್ ನಾಲಾ ವ್ಯಾಪ್ತಿಯ 26 ಕೆರೆಗಳಿಗೆ ನೀರು ತುಂಬಿಸುವಲ್ಲಿ ಕ್ರಮ ಕೈಗೊಂಡಿಲ್ಲ. ಕಾಲುವೆಗಳಿಗೆ ನೀರು ಹರಿಸಿಲ್ಲ. ಆ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ರೈತರು ಬರಗಾಲದ ಬವಣೆಯಿಂದ ನರಳುತ್ತಿದ್ದರೂ ಯಾರು ಕೇಳುತ್ತಿಲ್ಲ ಎಂದಿದ್ದಾರೆ.
Advertisement