ಕ.ಪ್ರ.ವಾರ್ತೆ | ಮೈಸೂರು | ಮೇ 2
ಬಸವಣ್ಣ ಅವರನ್ನು ಅರ್ಥ ಮಾಡಿಕೊಳ್ಳಲು ಬೇರೆಯವರು ಬರೆದಿರುವ ಪುಸ್ತಕಗಳನ್ನು ಓದಬೇಕಿಲ್ಲ. ಬಸವಣ್ಣ ಅವರು ಬರೆದಿರುವ ವಚನಗಳನ್ನು ಓದಿದರೆ ಸಾಕು. ವಚನಗಳಲ್ಲೇ ಅವರ ವ್ಯಕ್ತಿತ್ವ, ವಿಚಾರಗಳು ಅಡಗಿವೆ ಎಂದು ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಸಹ ಪ್ರಾಧ್ಯಾಪಕ ಡಾ.ಬಿ.ವಿ. ವಸಂತಕುಮಾರ್ ಹೇಳಿದರು.
ನಗರದ ಹೊಸಮಠದಲ್ಲಿ ಶುಕ್ರವಾರ ನಡೆದ ಬಸವ ಜಯಂತಿಯಲ್ಲಿ ಅಣ್ಣನ ಭಕ್ತಿಭಂಡಾರ ಕುರಿತು ಉಪನ್ಯಾಸ ನೀಡಿದ ಅವರು, ಬಸವಣ್ಣ ಅವರ ಜೀವನ ಚರಿತ್ರೆ ತಿಳಿಯಬೇಕಾದರೆ ಹರಿಹರ ಬರೆದಿರುವ ಬಸವೇಶ್ವರ ದೇವರ ರಗಳೆಗಳು ಓದಿದರೆ ಸಾಕು ಎಂದು ಸಲಹೆ ನೀಡಿದರು.
ಬಸವಣ್ಣ ಅವರನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಚಿತ್ರಿಸಿದ್ದಾರೆ. ರಾಜಕೀಯ ವ್ಯಕ್ತಿಗಳು ಜಾತಿ, ಬಸವಣ್ಣ ಅವರನ್ನು ಬಳಸಿಕೊಳ್ಳುವುದರಲ್ಲಿ ಅರ್ಥವಿದೆ. ಆದರೆ, ವಿದ್ವಾಂಸರು ಯಾಕೆ ತಮ್ಮ ಅನುಕೂಲಕ್ಕಾಗಿ ಬಸವಣ್ಣ ಅವರ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಬಸವಣ್ಣ ಅವರು ಯಾವುದೇ ಧರ್ಮ ಸ್ಥಾಪಿಸಿಲ್ಲ. ಹಿಂದೂ ಧರ್ಮದಲ್ಲಿದ್ದ ವಿಕೃತಗಳನ್ನು ನಾಶ ಮಾಡಲು ಬಸವಣ್ಣ ಹೋರಾಡಿದರು. ಹೀಗಾಗಿ ಅವರನ್ನು ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಕಾಣುತ್ತಾರೆ. ಇತರೆ ಧರ್ಮಗಳಿಗೆ ಸ್ಥಾಪಕರು, ಧರ್ಮ ಗ್ರಂಥಗಳಿವೆ. ಆದರೆ, ಹಿಂದೂ ಧರ್ಮಕ್ಕೆ ಸ್ಥಾಪಕರು ಯಾರೂ ಇಲ್ಲ. ಬಸವಣ್ಣ ಅಂತಹವರು ಹಿಂದೂ ಧರ್ಮವನ್ನು ಕಟ್ಟಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ಬಸವೇಶ್ವರ ಪ್ರತಿಮೆ ಮೆರವಣಿಗೆ ನಡೆಯಿತು. ಹೊಸಮಠದಿಂದ ಆವರಣದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಆರಂಭವಾದ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಠದ ಬಳಿ ಅಂತ್ಯಗೊಂಡಿತು.
ಪರಂಜ್ಯೋತಿ ಮಹಿಳಾ ಬಳಗದ ಪಾರ್ವತಿಶಂಕರ್ ವೃಂದದವರು ವಚನ ಗಾಯನ ನಡೆಸಿಕೊಟ್ಟರು. ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುದೇರು ಮಠದ ಸ್ವಾಮೀಜಿ, ಶ್ರೀಕಂಠ ಸ್ವಾಮೀಜಿ ಇದ್ದರು.
Advertisement