ಡಿಸಿಸಿಬಿ ರಕ್ಷಣೆಗೆ ಶೀಘ್ರ ಶ್ವೇತಪತ್ರ ಹೊರಡಿಸಿ: ಸಚಿವ ರತ್ನಾಕರ್ ಗುಡುಗು

Updated on

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ರಕ್ಷಿಸಲು ಅದರ ನಿರ್ದೇಶಕರು ಮುಂದೆ ಬರಬೇಕು. ಕೂಡಲೇ ಶ್ವೇತಪತ್ರ ಹೊರಡಿಸಿ ಗ್ರಾಹಕರ ಮನವೊಲಿಸಬೇಕು. ಇಲ್ಲವಾದರೆ ರಾಜಿನಾಮೆ ಕೊಟ್ಟು ಹೋಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಗುಡುಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಒಂದು ಸ್ವತಂತ್ರ ಸಂಸ್ಥೆ. ಅದನ್ನು ಉಳಿಸಿಕೊಳ್ಳಬೇಕಾದ್ದು ನಿರ್ದೇಶಕರ ಹೊಣೆ. ಸರ್ಕಾರ ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತದೆ. ಹಾಗೆಯೇ, ಡಿಸಿಸಿಬಿ ನಿರ್ದೇಶಕರೂ ಸಂಸ್ಥೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಹೊಣೆ ಹೊರಬೇಕು ಎಂದು ಪ್ರತಿಕ್ರಿಯಿಸಿದರು. ಡಿಸಿಸಿ ಬ್ಯಾಂಕ್ ಹಗರಣದ ಕುರಿತು ವಿವಿಧ ತನಿಖೆ ನಡೆಯುತ್ತಿವೆ. ಆದರೆ ರೈತರಿಗೆ ಇದರಿಂದ ಯಾವುದೇ ಗೊಂದಲ ಆಗದಿರುವಂತೆ ಕ್ರಮ ವಹಿಸಲಾಗುವುದು. ಆದರೆ ತಪ್ಪಿತಸ್ಥರ ವಿರುದ್ಧ ತನಿಖಾ ತಂಡಗಳು ಕ್ರಮ ಕೈಗೊಳ್ಳಲಿವೆ ಎಂದರು.
ದ್ವೇಷ ರಾಜಕಾರಣಕ್ಕೆ ನಮ್ಮಲ್ಲೊಬ್ಬರಿದ್ದಾರೆ: ದ್ವೇಷ ರಾಜಕಾರಣ ಮಾಡುವುದಕ್ಕೆ ನಮ್ಮ ತಾಲೂಕಿನಲ್ಲೊಬ್ಬರಿದ್ದಾರೆ. ಅವರಿಗೆ ದ್ವೇಷ ರಾಜಕಾರಣ ಮಾಡುವುದೇ ಕೆಲಸ ಎಂದು ಆರಗ ಜ್ಞಾನೇಂದ್ರ ಹೆಸರು ಹೇಳದೆ ಕಿಮ್ಮನೆ ಟೀಕಿಸಿದರು. ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರವಾಗಿದೆ, ಬಹಳ ದಿನಗಳಿಂದ ಹೋರಾಟ ಮಾಡಿದ್ದವರೊಬ್ಬರು, ಪ್ರಕರಣ ಹೊರಬಂದಿರುವುದು ತಮ್ಮ ಪ್ರಯತ್ನದಿಂದಲೇ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಈ ವಿಚಾರದಿಂದ ಈಗ ಏಕಾಏಕಿ ಹಿಂದೆ ಸರಿದಿದ್ದಾರೆ. ಎಲ್ಲಿ ರೈತರು ತಮ್ಮ ಮೇಲೆಯೇ ತಿರುಗಿ ಬೀಳುತ್ತಾರೋ ಎಂಬ ಆಂತಕದಲ್ಲಿ ತಮ್ಮ ಪ್ಲೇಟ್ ಬದಲಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ಈ ಅವ್ಯವಹಾರ ಹೊರಬಂದಿದ್ದು ಯಾವುದೇ ಹೋರಾಟದಿಂದಲ್ಲ ಎಂಬುದು ಸ್ಪಷ್ಟ. ಅನಾಮಧೇಯ ಪತ್ರದ ಆಧಾರದಲ್ಲಿ ತನಿಖೆ ನಡೆದು ಬ್ಯಾಂಕಿನೊಳಗಿನ ಸತ್ಯ ಹೊರಬಂದಿದೆ. ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿಯೊಂದಿಗೆ ಮಾತನಾಡಿ ಮಾಹಿತಿ ಪಡೆದು ಕೊಂಡಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದುಕೊಂಡಿದ್ದೇನೆಂದರು.
ಎಲ್ಲಾ ವಿಷಯ ಹೊರಬರುತ್ತದೆ: ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣ, ಶೇ.3ರ ಬಡ್ಡಿ ಹಗರಣ, ಸಾಲ ಮನ್ನಾ ಹಗರಣ, 64ಸಿ ತನಿಖೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಿಮ್ಮನೆ ರತ್ನಾಕರ್, ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಸಿಐಡಿ ಪೊಲೀಸ್ ಕೂಡಾ ತನಿಖೆ ನಡೆಸುತ್ತಾರೆ. ಆರ್‌ಬಿಐ, ನಬಾರ್ಡ್‌ನಿಂದಲೂ ಅನುದಾನ ಬ್ಯಾಂಕ್‌ಗೆ ನೀಡಿದ್ದರಿಂದ ಅವರೂ ಕೂಡ ತನಿಖೆ ನಡೆಸಲಿದ್ದಾರೆ. ಹೀಗಾಗಿ ಒಳಗಿನ ಹೂರಣ ಹೊರಗೆ ಬರಬೇಕಲ್ಲ ಎಂದರು. ತನಿಖೆ ವಿಚಾರದಲ್ಲಿ ನನ್ನದೇನು ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ ಎಂದ ಅವರು, ಒಟ್ಟಾರೆ ಡಿಸಿಸಿಬಿ ಸಮಗ್ರ ವಿಚಾರವನ್ನು ಸಹಕಾರ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ರಮೇಶ್ ಹೆಗಡೆ ಇದ್ದರು.

ಮಹಿಳೆ ಕತ್ತು ಕೊಯ್ದು ಕೊಲೆ
ಶಿವಮೊಗ್ಗ: ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆಗೈದು ಆಭರಣ ದೋಚಿರುವ ಘಟನೆ ವಿನೋಬ ನಗರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ವಿನೋಬನಗರ ಪೊಲೀಸ್ ಚೌಕಿ ಬಳಿ 2ನೇ ಕ್ರಾಸ್‌ನಲ್ಲಿ ವಾಸವಿದ್ದ ಲಲಿತಮ್ಮ (60) ಕೊಲೆಗೀಡಾದವರು. ಲಲಿತಮ್ಮ ಪತಿ ನಿವೃತ್ತ ಎಂಜಿನಿಯರ್ ಪರಮೇಶ್ವರಪ್ಪ, ಕಾರ್ಯ ನಿಮಿತ್ತ ಬುಧವಾರ ಬೆಳಿಗ್ಗೆ ಮನೆಯಿಂದ ಹೊರಹೋಗಿದ್ದರು. ನಂತರ ಲಲಿತಮ್ಮ ಅವರ ಕೊಲೆ ನಡೆದಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಕೆಲಸದಾಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.  ಆರೋಪಿಗಳು ಲಲಿತಮ್ಮ ಅವರ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾರೆ. ನಂತರ ಅವರ ಕೊರಳಿನಲ್ಲಿದ್ದ ಮಾಂಗಲ್ಯ, ಇನ್ನಿತರ ಆಭರಣಗಳನ್ನು ಅಪಹರಿಸಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ರಕ್ಷಣಾಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ದಯಾಳು ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.  


ಡಿಸಿಸಿ ಬ್ಯಾಂಕ್ ವ್ಯವಹಾರ ಪಾರದರ್ಶಕ: ವಿಜಯದೇವ್
ತೀರ್ಥಹಳ್ಳಿ: 3 ಸಾವಿರಕ್ಕೂ ಹೆಚ್ಚು ರೈತರಿಗೆ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕಿನಿಂದ ಉಪಯೋಗವಾಗಿದೆ. ತಾಲೂಕಿನ ರೈತರು ಶೂನ್ಯ ಬಡ್ಡಿ ದರದ ಪ್ರಯೋಜನ ಪಡೆದು ಕೊಂಡಿದ್ದಾರೆ. ಬ್ಯಾಂಕ್ ವ್ಯವಹಾರ ಪಾರದರ್ಶಕವಾಗಿದೆ ಎಂದು ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ,  ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ವಿಜಯದೇವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.        
ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿ ಹಾಲಿ ರು. 603 ಕೋಟಿ ಠೇವಣಿ ಹಣ ಇದೆ. ನಬಾರ್ಡ್, ಅಪೆಕ್ಸ್ ಬ್ಯಾಂಕ್‌ನಿಂದ ರು. 278 ಕೋಟಿ ಸಾಲ ಪಡೆಯಲಾಗಿದೆ. ಬ್ಯಾಂಕ್ ಠೇವಣಿದಾರರ ಮತ್ತು ಸಾಲ ನೀಡಿದವರ ಹಣವನ್ನು  ನಿಯಮಾನುಸಾರ ಹಿಂದಿರುಗಿಸಲು ಬ್ಯಾಂಕ್ ಸಶಕ್ತವಾಗಿದೆ. ರಾಜಕೀಯ ಕಾರಣಗಳಿಗೆಗಾಗಿ ಕೆಲವರು ಬ್ಯಾಂಕ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಠೇವಣಿದಾರರು ಇದಕ್ಕೆ ಕಿವಿಗೊಡುವ ಅಗತ್ಯವಿಲ್ಲ. ಡಿಸಿಸಿ ಬ್ಯಾಂಕ್ ರು. 1031 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ರು. 27.3 ಕೋಟಿ ಷೇರು ಬಂಡವಾಳ,  ರು. 39 ಕೋಟಿ ನಿಧಿ ಸಂಗ್ರಹವಾಗಿದೆ. ರು. 444 ಕೋಟಿ ಹಣ ಕೃಷಿ ಸಾಲಗಳಿಗೆ ಹಾಗೂ ರು. 284 ಕೋಟಿ ಕೃಷಿಯೇತರ ಸಾಲಗಳಿಗೆ ವಿತರಿಸಲಾಗಿದೆ.  ರು. 202 ಕೋಟಿ ಹಣವನ್ನು ನಿಯಮಾನುಸಾರ ಹೂಡಿಕೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ರು. 8.6 ಕೋಟಿ ನಿವ್ವಳ ಲಾಭ ಗಳಿಸಿದೆ ಹಾಗೂ ಶೇ.90ರಷ್ಟು ಸಾಲ  ವಸೂಲಾತಿಯಾಗಿದೆ.  ತೀರ್ಥಹಳ್ಳಿ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕಿನ 4 ಶಾಖೆಗಳಿದ್ದು, ಒಟ್ಟು ರು. 49.5 ಕೋಟಿ ಠೇವಣಿ ಇದೆ.  ರು. 122.26 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್ ವ್ಯವಹಾರ ಪಾರದರ್ಶಕವಾಗಿದೆ ಎಂದರು.
ಮಾಜಿ ನಿರ್ದೇಶಕ ನಾಕುಂಜಿ ಸುಧಾಕರ್, ಪ್ರಸನ್ನಕುಮಾರ್, ಸಸಿತೋಟ ಸುಧಾಕರ್ ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com