ತುಮಕೂರು: ಮಂಕುತಿಮ್ಮನ ಕಗ್ಗವನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಉತ್ತೀರ್ಣರಾಗಬಹುದು ಎಂದು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಮಾಜಿ ನಿರ್ದೇಶಕ ಹಾಗೂ ಪ್ರಾಚೀನ ಕಾವ್ಯಗಳ ಪ್ರವಚನಕಾರರಾದ ಮುರಳಿಕೃಷ್ಣಪ್ಪ ಹೇಳಿದರು.
ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ವತಿಯಿಂದ ವಿದ್ಯಾವಾಹಿನಿ ಪಪೂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 257ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗ ಕೃತಿ ಬಗ್ಗೆ ಉಪನ್ಯಾಸ ನೀಡಿದರು.
ನಿಶ್ಚಿತವಿಲ್ಲದ ವಸ್ತುವಿನಿಂದ ನಿಶ್ಚಯದ ದಾರಿಗೆ ನಮ್ಮನ್ನು ಕೊಂಡೊಯ್ಯುತ್ತಾರೆ. ನಮ್ಮ ವಯಸ್ಸು ಬೆಳೆದಂತೆಲ್ಲಾ ಹಸಿವು ಬೆಳೆಯುವುದು. ಪ್ರಪಂಚದ ವಿಷಯ ವಾಸನೆಗಳ ದಾಸರು ನಾವಾಗಿದ್ದೇವೆ. ಈ ಸ್ಥಿತಿಯಿಂದ ಮುಕ್ತರಾಗಬೇಕಾದರೆ ಮಂಕುತಿಮ್ಮನ ಕಗ್ಗ ಅಳವಡಿಸಿಕೊಳ್ಳಬೇಕು ಎಂದರು.
ಕನ್ನಡದ ಭಗವದ್ಗೀತೆ ಎಂದೇ ಖ್ಯಾತಿಯಾಗಿರುವ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದಲ್ಲಿ ಅದ್ವೈತ ತತ್ವಗಳಿವೆ. ತತ್ವಗಳ ಜೀವನದರ್ಶನವಿದೆ. ಕಗ್ಗದಲ್ಲಿನ ಪದ್ಯಗಳು ನಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಶಕ್ತಿ ಕೊಡುತ್ತವೆ. ನಮ್ಮ ಜೀವನವನ್ನು ಉಜ್ವಲಗೊಳಿಸುವ ಇಂಥ ಶ್ರೇಷ್ಠ ಕೃತಿಯನ್ನು ರಚಿಸಿ ಡಿ.ವಿ.ಜಿಯವರು ಕನ್ನಡಿಗರಿಗೆ ಉಪಕರಿಸಿದ್ದಾರೆ ಎಂದರು.
ಡಿ.ವಿ.ಜಿಯವರು ಕಗ್ಗದ ಆರಂಭದಲ್ಲೇ ಪ್ರಾರ್ಥನಾ ರೂಪದ ಮಂಗಳ ಪದ್ಯಗಳನ್ನು ರಚಿಸಿದ್ದು, ಅವುಗಳಲ್ಲಿ ಹೀಗೆ ಹೇಳುತ್ತಾರೆ, “AVæàÞ^ÚÁÚ ಶಕ್ತಿಯೊಂದು ಆಳುತಿದೆ. ಆ ಶಕ್ತಿಗೆ ಶರಣಾಗಿ ನಮಿಸೋ, ಆ ಶಕ್ತಿಯು ಇದೆಯೋ ಇಲ್ಲವೋ ಗೊತ್ತಿಲ್ಲ. ಅದರಿಂದ ನಿನಗೆ ಒಳ್ಳೆಯದಾಗುವುದಾದರೆ «ÚÉßÑæàÞ’ ಎಂದು. ಇಲ್ಲಿ ಡಿ.ವಿ.ಜಿಯವರು ದೇವರು ಇದ್ದಾನೋ, ಇಲ್ಲವೋ ಸ್ಪಷ್ಟವಾಗಿ ಹೇಳುವುದಿಲ್ಲ. ಈ ಪದ್ಯಗಳು ಸ್ವಲ್ಪ ಗೊಂದಲದಿಂದ ಕೂಡಿವೆ. ಆತ್ಮದ ಹುಡುಕಾಟದ ದಾರಿಯೇ ಈ ಕಗ್ಗ. ಇದಕ್ಕೆ ಪೂರಕವಾಗಿ ಮಂಗಳ ಪದ್ಯಗಳಿವೆ. ಈ ಪದ್ಯಗಳಲ್ಲಿ ಡಿ.ವಿ.ಜಿಯವರು ಜೀವನವೆಂಬ ರಹಸ್ಯಕ್ಕೆ ಶರಣಾಗು ಎಂದು ಹೇಳುತ್ತಾ ಜೀವಕ್ಕೂ ಪ್ರಪಂಚಕ್ಕೂ ಇರುವ ಸಂಬಂಧ ತಿಳಿಸುತ್ತಾರೆ. ಪ್ರಪಂಚ ನೋಡುವುದೇ ಇಂದ್ರಿಯಗಳ ಕೆಲಸವಲ್ಲ. ಇಂದ್ರಿಯಗಳಾಚೆ ಕಾಣುವ ಪರಮಾತ್ಮನ ಸತ್ಯವನ್ನು ಅರಿಯುವ ಉದ್ದೇಶವಾಗಬೇಕು ಎನ್ನುತ್ತಾರೆ ಡಿವಿಜಿಯವರು ಎಂದರು.
ಕೆ.ಟಿ. ಸುಶೀಲ ಪ್ರಾರ್ಥಿಸಿದರು. ಸತ್ಸಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿ, ಶಿಶುನಾಳ ಷರೀಫರ ತತ್ವಪದಗಳ ಗಾಯಕರಾದ ಷರೀಫ ಎಂ.ಸಿ. ನರಸಿಂಹಮೂರ್ತಿ ಭಕ್ತಿಗೀತೆ ಹಾಡಿದರು. ಶಿರಾದ ಎಚ್.ಲೋಕೇಶ್ ಅಗ್ರಹಾರ ನಿರೂಪಿಸಿ, ವಂದಿಸಿದರು.
Advertisement