ಕಾರ್ಕಳ: ಗ್ರಾಮೀಣ ಕ್ರೀಡೆಗಳು ಮತ್ತು ಸಂಪ್ರದಾಯಕ ಹಬ್ಬಗಳ ಆಚರಣೆಯಿಂದ ಮಾನವನ ಆರೋಗ್ಯ ವೃದ್ಧಿಸಲು ಸಾಧ್ಯವಿದೆ. ಮಣ್ಣಿನ ಸಂಪರ್ಕದಿಂದ ಚರ್ಮ ವ್ಯಾಧಿ ದೂರಿಕರಿಸಬಹುದು. ಅದೇ ರೀತಿಯಲ್ಲಿ ಸಂಪ್ರದಾಯಿಕವಾಗಿ ಆಚರಿಸುವ ಪ್ರತಿಯೊಂದು ಹಬ್ಬವು ಪ್ರಕೃತಿ ಸಮತೋಲನ ಜೊತೆಗೆ ಮಾನವನ ಆರೋಗ್ಯ ಕಾಪಾಡಲು ಸಾಧ್ಯವಿದೆ. ಇದು ವೈಜ್ಞಾನಿಕ ಸತ್ಯವಾಗಿದೆ ಎಂದು ಬ್ರಹ್ಮಾವರ ಕೃಷಿ ಕೇಂದ್ರದ ತಜ್ಞ ಬಳ್ಳಾರಿ ಧನಂಜಯ ಕುಮಾರ್ ಹೇಳಿದರು.
ಸಾಣೂರು ಪೃಥ್ವಿ ಯುವ ಬಾಂಧವರ್ ಏರ್ಪಡಿಸಿದ ನಾಲ್ನನೇ ವರ್ಷದ ಆಟಿಯ ಆಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಣ್ಣಿನಲ್ಲಿ ಚರ್ಮ ರೋಗ ಗುಣಪಡಿಸುವ ಔಷಧ ಇದ್ದುದರಿಂದ ಆಯುರ್ವೇದಿಕ್ನಲ್ಲಿ ಮಣ್ಣಿನ ಲೇಪನ ಚಿಕಿತ್ಸೆ ಮಾಡಲಾಗುತ್ತಿದೆ. ಯುಗಾದಿ ಹಬ್ಬದಂದು ಸೇವನೆ ಮಾಡುವ ಕಹಿಬೇವಿ ಸೊಪ್ಪು ದೈಹಿಕವಾಗಿರುವಂತಹ ನಂಜಿನ ಅಂಶವನ್ನು ಕಡಿಮೆಗೊಳಿಸುತ್ತದೆ. ಆಟಿ ತಿಂಗಳ ಅಮಾವಸ್ಯೆಯೊಂದು ಸೇವನೆಗೈಯುವ ಕಷಾಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತೆ ಮಾಡುತ್ತದೆ. ದೀಪಾವಳಿ ಹಬ್ಬದಲ್ಲಿ ಆಚರಿಸಲಾಗುವ ಎಣ್ಣೆ ಸ್ನಾನ ಪ್ರತಿದಿನ ಮಾಡುವುದರಿಂದ ಮೈ ಕಾಂತಿ ಹೆಚ್ಚಿಸುವಂತೆ ಮಾಡುತ್ತದೆ. ಸಮುದ್ರ ಸ್ನಾನದಿಂದ ಚರ್ಮ ರೋಗ ತಡೆಗಟ್ಟಲು ಸಾಧ್ಯವಿದೆ. ನಾಗರಪಂಚಮಿ ಆಚರಣೆಯಿಂದ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯವಿದೆ. ಪ್ರತಿಯೊಂದು ಸಂಪ್ರದಾಯಕ ಹಬ್ಬಗಳ ಮತ್ತು ಗ್ರಾಮೀಣ ಕ್ರೀಡೆಗಳನ್ನು ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಸಾಣೂರು ಮಹಾಲಿಂಗೇಶ್ವರ ದೇವಳದ ಅರ್ಚಕ ವೇ.ಮೂ. ರಾಮ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮೀಣ ಕ್ರೀಡೆ ಆಚರಣೆಯಿಂದ ಊರವರು ಒಂದೆಡೆ ಬೆರೆಯಲು ಸಹಕರಿಯಾಗುತ್ತದೆ. ಈ ಮೂಲಕ ನಾಡ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ತಿಳಿಸಿದರು.
ತುಳುನಾಡ ಸಂಪ್ರದಾಯದಂತೆ ಕಾರ್ಯಕ್ರಮ ಜರುಗಿದ್ದು, ವಿವಿಧ ಕ್ರೀಡಾಕೂಟ, ಆಕರ್ಷಕ ತಿಂಡಿ ತಿನಸುಗಳು ಎಲ್ಲರ ಗಮನ ಸೆಳೆದವು.
ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಕೋಟ್ಯಾನ್, ಪ್ರಥ್ವಿ ಯುವ ಬಾಂಧವರು ಇದರ ಅಧ್ಯಕ್ಷ ಅರುಣ್ ಡಿ' ಸಿಲ್ವ, ಸಾಣೂರು ಗುತ್ತಿನ ಮಾಲಿನಿ ಎನ್. ರೈ, ಕೃಷಿಕ ವಾಸು ಶೆಟ್ಟಿ, ಸಾಣೂರು ಗುತ್ತಿನ ಪ್ರಭಾತ್ ಶೆಟ್ಟಿ, ಚಂದ್ರ ಶೇಖರ್ ಪೂಜಾರಿ, ಕೇಶವ ಆಚಾರ್ಯ, ವಾರಿಜಾ ಶೆಟ್ಟಿ ಇದ್ದರು.
ಸಮಾರೋಪ ಸಮಾರಂಭವು ಪರಪ್ಪಾಡಿ ನಿರ್ಮಲ ಪದವು ಚರ್ಚ್ನ ಧರ್ಮಗುರು ರೆ.ಫಾ. ವಿನ್ಸೆಂಟ್ ಲೋಬೋ, ಸಾಣೂರು ಮಸೀದಿ ಮುಖ್ಯಸ್ಥ ಮುಸೂಫ್ ಸಖಾಸಿ ಉಪಸ್ಥಿತಿಯಲ್ಲಿ ಜರುಗಿತು.
Advertisement