ಮಣಿಪಾಲ: ಉಡುಪಿ ನಗರಸಭೆ ಸರಹದ್ದಿನಲ್ಲಿರುವ ಬಡಗಬೆಟ್ಟು, ಉದ್ಯಾವರ, ಕಡೆಕಾರು, ಅಲೆವೂರು, ಅಂಬಲಪಾಡಿ ಗ್ರಾಪಂಗಳನ್ನು ಉಡುಪಿ ನಗರಸಭೆಗೆ ಸೇರಿಸಿ 'ಗ್ರೇಟರ್ ಉಡುಪಿ' ರಚನೆ ಸಂಬಂಧ ಎಲ್ಲಾ ಮೂಲ ಸೌಕರ್ಯ ಹಾಗೂ ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಗ್ರೇಟರ್ ಉಡುಪಿ ಸಂಬಂಧ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಈಗಾಗಲೇ ಉಡುಪಿ ಅಭಿವೃದ್ಧಿಗೆ ಕುಡ್ಸೆಂಪ್ನಿಂದ ರು. 85 ಕೋಟಿ, ನಗರೋತ್ಥಾನದಡಿ ರು. 30 ಕೋಟಿ ಬಿಡುಗಡೆಯಾಗಿದೆ.
ಬ್ರಹ್ಮಾವರ ಮತ್ತು ಕಾಪು ಗ್ರಾಪಂಗಳನ್ನು ಪುರಸಭೆ ಮಟ್ಟಕ್ಕೇರಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಅಭಿವೃದ್ಧಿಗೆ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಉಡುಪಿ ನಗರಸಭೆ ಅಧ್ಯಕ್ಷ ಯುವರಾಜ್ ಅವರು, ಸಿಬ್ಬಂದಿ ಕೊರತೆ ಮತ್ತು ನಿರ್ವಹಣೆ ಸಂಬಂಧ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಈಗಾಗಲೇ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಮುಂದಿನ ಹಂತದಲ್ಲಿ ನಗರಸಭೆಗಳಲ್ಲಿ ಖಾಲಿ ಹುದ್ದೆ ಭರ್ತಿಮಾಡಲಾಗುವುದು, ಹಂತ ಹಂತವಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್, ಅಪರ ಜಿಲ್ಲಾಧಿಕಾರಿ ಕುಮಾರ್, ನಗರಸಭಾ ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ನಗರಸಭಾ ಆಯುಕ್ತ ಶ್ರೀಕಾಂತ್, ಯೋಜನಾ ನಿರ್ದೇಶಕ ಪ್ರಸನ್ನ, ಜಿಪಂ ಪ್ರಭಾರ ಅಧ್ಯಕ್ಷ ಉದಯ ಕೋಟ್ಯಾನ್, ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.
Advertisement