ಕೆಡಿಪಿ ಸಭೆ: ಅರಣ್ಯ ಇಲಾಖೆ ಅಧಿಕಾರಿಗೆ ತರಾಟೆ

Updated on

ಜೋಯಿಡಾ:  ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ಮಾಡುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಟಿತಗೊಳ್ಳುತ್ತಿದ್ದು, ಇದರಿಂದ ಅನುದಾನ ಮರಳಿ ಹೋಗುತ್ತಿದೆ ಎಂದು ಜನಪ್ರತಿನಿಧಿಗಳು ಕೆಡಿಪಿ ಸಭೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆಯಿತು.
ತಾಪಂ ನೂತನ ಅಧ್ಯಕ್ಷೆ ಕಿಶೋರಿ ಪರವಾರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಕೆಡಿಪಿ ಸಭೆಯಲ್ಲಿ ಅರಣ್ಯ ಇಲಾಖೆಯ ವಿಷಯವೇ ಪ್ರಮುಖವಾಗಿ ಚರ್ಚೆ ಆಯಿತು.
ಹುಲಿ ಯೋಜನೆ ವ್ಯಾಪ್ತಿಯಲ್ಲಿ ಅನೇಕ ಕುಟುಂಬಗಳನ್ನು ಅವೈಜ್ಞಾನಿಕ ಪ್ಯಾಕೇಜ್ ನೀಡಿ ಒಕ್ಕಲೆಬ್ಬಿಸುವ ಹುನ್ನಾರ ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಮಾಡುತ್ತಿದ್ದು, ಹುಲಿ ಯೋಜನೆಯಿಂದ ಯಾರನ್ನೂ ಒಕ್ಕಲೆಬ್ಬಿಸಬಾರದೆಂದು ನಿರ್ಣಯ ಅಂಗೀಕರಿಸಲಾಯಿತು.
ಆನೆ ಮತ್ತು ಕರಡಿ ದಾಳಿಯಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರ ನೀಡದಿರುವ ಬಗ್ಗೆ ರಾಮಕೃಷ್ಣ ಪೆಡ್ನೇಕರ ಕುರಿತಂತೆ ಗಮನ ಸೆಳೆದರು. ಪಿಡಿಒಗಳು ಜವಾಬ್ದಾರಿ ವಹಿಸಿ ಕೆಲಸ ಮಾಡಿಕೊಡಬೇಕೆಂದು ಕಾರ್ಯನಿರ್ವಹಣಾಧಿಕಾರಿ ತಾನಾಜಿ ವಾಡಿಕರ ತಿಳಿಸಿದರು.
ದಾಂಡೇಲಿ ತಾಲೂಕು ರಚನೆ ಕುರಿತಂತೆ ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ತಾಲೂಕಿನ ಯಾವುದೇ ಪಂಚಾಯಿತಿಯ ಒಂದು ಇಂಚು ಜಾಗೆ ಕೂಡ ಸೇರಿಸಬಾರದೆಂದು ತಾಪಂ ಸದಸ್ಯ ವಿಲಾಸ ನಾಯ್ಕ, ಪ್ರಧಾನಿ ಗ್ರಾಪಂ ಸದಸ್ಯ ಕೃಷ್ಣಾ ದೇಸಾಯಿ, ಸಂತೋಷ ಮಂಥೆರೊ ಮುಂತಾದವರು ವಿರೋಧಿಸಿದರು. ಈ ಕುರಿತಂತೆ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯಿತು.
ರಾಮನಗರದಿಂದ-ಜೋಯಿಡಾಕ್ಕೆ ಬಸ್ ಆರಂಭಿಸುವಂತೆ ನೀಡಿದ ಮನವಿಗೆ ಸ್ಪಂದಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ವಾರದೊಳಗೆ ಬಸ್ ಆರಂಭಿಸುವುದಾಗಿ ಭರವಸೆ ನೀಡಿದರು.
ಉಳಿದಂತೆ ಮಹಿಳಾ ಮತ್ತು ಮಕ್ಕಳ ಕಲಾಣ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನೆ, ಕೃಷಿ, ತೋಟಗಾರಿಕೆ, ಶಿಕ್ಷಣ, ಲೋಕೋಪಯೋಗಿ ಇಲಾಖೆಗಳಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆಯಾಯಿತು.
ತಾಪಂ ಉಪಾಧ್ಯಕ್ಷ ಆರ್. . ಭಟ್, ಸದಸ್ಯರಾದ ವಿಲಾಸ ನಾಯ್ಕ, ರೋಹಿಣಿ, ಜೋಸ್ನಾ ಪೆಡ್ನೆಕರ, ಚಂದ್ರಕಲಾ ಕಟ್ಟಿಮನಿ, ಕಮಲಾವತಿ ಪಾಟೇಕರ್, ಕಾರ್ಯನಿರ್ವಹಣಾಧಿಕಾರಿ ತಾನಾಜಿ ವಾಡಿಕರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com