ಶಿರಸಿ: ಭಗವದ್ಗೀತೆ ನಮ್ಮ ದೇಶದ ಶ್ರೇಷ್ಠ ಗ್ರಂಥ. ಇದು ವೇದದಲ್ಲಿ ಹೇಳಿದ ಎಲ್ಲ ವಿಷಯವನ್ನು ಸಂಗ್ರಹಿಸಿ ನಮಗೆ ನೀಡುತ್ತದೆ. ಆದ್ದರಿಂದ ಗೀತೆಯನ್ನು ಎಲ್ಲರೂ ನಿತ್ಯ ಪಠಿಸಬೇಕು ಎಂದು ಸ್ವರ್ಣವಲ್ಲಿ ಶ್ರೀಗಳು ನುಡಿದರು.
ಬೆಟ್ಟಳ್ಳಿ ಹಾಗೂ ಮಂಜುಗುಣಿ ಸೀಮೆಯ ಶಿಷ್ಯ-ಭಕ್ತರು ಚಾತುರ್ಮಾಸ್ಯದ ನಿಮಿತ್ತ ಸಮರ್ಪಿಸಿದ ಭಿಕ್ಷೆ-ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಟ ಪ್ರಾಚೀನವೂ ಆದದ್ದು ವೇದ ಸಾಹಿತ್ಯ. ವೇದದಲ್ಲಿ ಜೀವನದ ಮಾರ್ಗ, ಆಯುರ್ವೇದ, ಖಗೋಳ ವಿಜ್ಞಾನ ಹೀಗೆ ಎಲ್ಲ ವಿಷಯಗಳು ತುಂಬಿಕೊಂಡಿವೆ. ಅಂತೆಯೇ ಜಗತ್ತಿ ಅನೇಕ ಸಾಹಿತ್ಯಗಳು ಇವೆ. ಅವೆಲ್ಲಕ್ಕಿಂತಲೂ ವೇದ ಪ್ರಾಚೀನವಾದುದು. ಇದು ಎತ್ತರದಲ್ಲಿರುವ ಬೀದಿ (ಹೈಮಾಸ್ಟ್) ಬೆಳಕಿನಂತೆ. ಎಲ್ಲ ವಿಷಯದಲ್ಲೂ ವ್ಯಕ್ತಿಗಳ ಮೇಲೂ ಬೆಳಕು ಚೆಲ್ಲುತ್ತದೆ. ಆದ್ದರಿಂದ ಇದು ಶ್ರೇಷ್ಠ, ಪ್ರಾಚೀನವೂ ಆಗಿದೆ. ಇದರ ಸಾರಸಂಗ್ರಹವೇ ಭಗವದ್ಗೀತೆ.
ವೇದಕ್ಕೂ ಗೀತೆಗೂ ಸಾಮ್ಯವಿದೆ. ವೇದದ ವಾಕ್ಯವೇ ನೇರವಾಗಿ ಗೀತೆಯಲ್ಲಿ ಕಂಡುಬರುತ್ತದೆ. ವೇದ ವೃಕ್ಷವಾದರೆ ಭಗವದ್ಗೀತೆ ಅದರ ಹಣ್ಣು. ಅದರಲ್ಲಿ ಗಿಡದ ಎಲ್ಲ ಸಾರವೂ ಸೇರಿರುತ್ತದೆ. ಸವಿಯಲು ಸುಮಧುರವಾಗಿರುತ್ತದೆ. ಅದಲ್ಲದೆಇನ್ನೊಂದು ಗಿಡವನ್ನು ಹುಟ್ಟಿಸುವ ಶಕ್ತಿಯೂ ಇದಕ್ಕಿದೆ. ಹಾಗೆಯೇ ವೇದವೃಕ್ಷದ ಫಲವಾದ ಭಗವದ್ಗೀತೆಗೆ ಎಲ್ಲ ಶಕ್ತಿಯೂ ಇದೆ. ವೇದ ಸೂರ್ಯನಾದರೆ ಗೀತೆ ಅದರ ಪ್ರತಿಬಿಂದ. ಸೂರ್ಯನನ್ನು ನೇರವಾಗಿ ನೋಡಲಾಗದು. ಅದಕ್ಕೆ ನೀರಿನ ಪಾತ್ರದಲ್ಲಿ ಪ್ರತಿಬಿಂಬದ ಮೂಲಕ ನೋಡುವ ವ್ಯವಸ್ಥೆಯಿರುತ್ತದೆ. ಅದರಲ್ಲಿ ಸೂರ್ಯನನ್ನು ಸರಿಯಾಗಿ ನೋಡಬಹುದು. ಹಾಗೆಯೇ ವಿಸ್ತಾರವಾದ ವೇದರಾಶಿಯನ್ನು ತಿಳಿಯುವುದು ಕಷ್ಟಸಾಧ್ಯ. ಅದರ ಸಾರಸಂಗ್ರಹವಾದ ಗೀತೆಯಿಂದ ನಾವು ಜೀವನಕ್ಕೆ ಬೇಕಾಗುವ ಎಲ್ಲ ಅಂಶಗಳನ್ನು ತಿಳಿದುಕೊಳ್ಳಬಹುದು. ಆದ್ದರಿಂದ ಎಲ್ಲರೂ ಭಗವದ್ಗೀತೆಯನ್ನು ಓದಬೇಕು. ಸಾರವನ್ನು ಅರಿಯಬೇಕು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಿರಸಿ ಶ್ರೀ ಎಂ.ಜಿ. ಹೆಗಡೆ ಹುಲಿಮನೆ ಸಂಗ್ರಹಿಸಿ ಪ್ರಕಟಿಸಿದ ಶ್ರೀ ಜಗನ್ನಾಥ ದಾಸರು ರಚಿಸಿದ ಕನ್ನಡ ಪದ್ಯ ರೂಪವಾದ ಲಕ್ಷ್ಮೀ ಹೃದಯ ಮತ್ತು ನಾರಾಯಣ ಹೃದಯ ಪುಸ್ತಕ ಲೋಕಾರ್ಪಣಗೊಳಿಸಿದರು.
Advertisement