ಮುಕೇಶ್ ಅಂಬಾನಿ-ಅನಂತ್ ಅಂಬಾನಿ
ದೇಶ
ಇಬ್ಬರು ಅಂಬಾನಿಗಳ ಕಥೆ; ಅಪ್ಪ ಮುಕೇಶ್ 'ಕೈ'ಗೆ ಜೈ ಎಂದರೆ ಪುತ್ರ ಅನಂತ್ ಮೋದಿ ರ್ಯಾಲಿಯಲ್ಲಿ ಪ್ರತ್ಯಕ್ಷ!
ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೊರಾ ಅವರಿಗೆ ಬೆಂಬಲ ಸೂಚಿಸಿ ...
ಮುಂಬೈ: ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೊರಾ ಅವರಿಗೆ ಬೆಂಬಲ ಸೂಚಿಸಿ ಉದ್ಯಮಿ ಮುಕೇಶ್ ಅಂಬಾನಿ ಪ್ರಚಾರ ಮಾಡಿದ ನಂತರ ಅವರ ಪುತ್ರ ಅನಂತ್ ಅಂಬಾನಿ ಮಾತ್ರ ನಿನ್ನೆ ಮುಂಬೈಯಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು.
ಮುಂಬೈಯ ಉಪನಗರ ಬಂದ್ರ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಭಿಕರ ಮುಂದಿನ ಸ್ಥಾನದಲ್ಲಿ ಅನಂತ್ ಅಂಬಾನಿ ಕುಳಿತುಕೊಂಡಿದ್ದರು. ಅಲ್ಲಿ ಮರಾಠಿ ಸುದ್ದಿ ವಾಹಿನಿಯವರು ಮಾತನಾಡಿಸಿದಾಗ ಪ್ರತಿಕ್ರಿಯಿಸಿದ ಅನಂತ್ ಅಂಬಾನಿ, ಮೋದಿಯವರ ಭಾಷಣ ಕೇಳಲು ಮತ್ತು ಅವರ ಮೂಲಕ ದೇಶಕ್ಕೆ ಬೆಂಬಲ ಸೂಚಿಸಲು ಬಂದಿರುವುದಾಗಿ ಹೇಳಿದರು.
ಮುಂಬೈಯಲ್ಲಿ ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಫ್ರಾನ್ಸ್ ನೊಂದಿಗೆ ಮಾಡಿಕೊಂಡಿರುವ ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ನವರು ಮುಕೇಶ್ ಅಂಬಾನಿ ಸೋದರ ಅನಿಲ್ ಅಂಬಾನಿ ಮೇಲೆ ಸತತ ವಾಗ್ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೊರಾಗೆ ಬೆಂಬಲ ಸೂಚಿಸಿರುವುದು ಚರ್ಚಾಸ್ಪದವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ