ಲಖನೌ: ಚುನಾವಣಾ ಲಾಭ ಪಡೆಯಲು ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಜಾತಿಯನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವ ಮೂಲಕ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಹತ್ಯೆ ಮಾಡಿದ್ದಾರೆ ಎಂದು ಬಿಎಸ್ಪಿ ಮುಖ್ಯಸ್ಥ ಮಾಯಾವತಿ ಆರೋಪಿಸಿದ್ದಾರೆ.
ಎಸ್ಪಿ- ಬಿಎಸ್ಪಿ- ಆರ್ ಎಲ್ ಡಿ ಮೈತ್ರಿ ಅವಕಾಶ ಮೈತ್ರಿ ಎಂದು ಪ್ರಧಾನಿ ಮೋದಿ ನಿನ್ನೆ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, ,ಸಮಾಜವಾದಿ ಪಕ್ಷದ ಮುಖಂಡರಾದ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ರೀತಿಯಲ್ಲಿ ಮೋದಿ ಹಿಂದುಳಿದ ವರ್ಗದ ಜಾತಿಯಲ್ಲಿ ಜನಿಸಿಲ್ಲ. ರಾಜಕೀಯದಲ್ಲಿ ಲಾಭ ಪಡೆಯುವ ಸಲುವಾಗಿ ಮೋದಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೇಲ್ವರ್ಗದ ಜಾತಿಗಳನ್ನು ಸೇರಿಸಿದ್ದಾರೆ ಎಂದು ಹೇಳಿದರು.
ಬಿಜೆಪಿಯವರ ದಲಿತ - ಹಿಂದುಳಿದ ಕಾರ್ಡ್ ಎಲ್ಲಿಯೂ ವರ್ಕೌಟ್ ಆಗಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಂದಿಗೂ ಹಿಂದುಳಿದ ವರ್ಗದವರು ಎಂದು ತಾವೂ ಪರಿಗಣಿಸುವುದಿಲ್ಲ, ಮೇಲ್ವರ್ಗದವರೆಂದೇ ಯಾವಾಗಲೂ ನೋಡಬೇಕಾಗಿದೆ ಎಂದರು.
ನರೇಂದ್ರ ಮೋದಿ ಹಾಗೂ ಬಿಜೆಪಿ ದಲಿತರನ್ನು ಕೆಳಮಟ್ಟದಲ್ಲಿಯೇ ಕಾಣುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ದಲಿತ ಹಾಗೂ ಹಿಂದುಳಿದ ವರ್ಗದ ಕಾರ್ಡ್ ಗಳಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
Advertisement