ಅನಾರೋಗ್ಯಪೀಡಿತರಿಗೆ ಖಿಚಡಿಯೇ ಬೇಕು: ಪ್ರಧಾನಿ 'ಖಿಚಡಿ' ಹೇಳಿಕೆಗೆ ಶಶಿ ತರೂರ್ ಟಾಂಗ್

ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಹಾಘಟಬಂಧನ್ ಸರ್ಕಾರವು "ಖಿಚಡಿ" ಸರ್ಕಾರವಾಗಲಿದೆ, ದೇಶಕ್ಕೆ ಈ ಖಿಚಡಿ ಸರ್ಕಾರ ಬೇಡ ಎಂಬ ಮಾತಿಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಕೈ ಅಭ್ಯರ್ಥಿ....
ಶಶಿ ತರೂರ್
ಶಶಿ ತರೂರ್
ನವದೆಹಲಿ: ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಹಾಘಟಬಂಧನ್ ಸರ್ಕಾರವು "ಖಿಚಡಿ" ಸರ್ಕಾರವಾಗಲಿದೆ, ದೇಶಕ್ಕೆ ಈ ಖಿಚಡಿ ಸರ್ಕಾರ ಬೇಡ ಎಂಬ ಮಾತಿಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಕೈ ಅಭ್ಯರ್ಥಿ ಶಶಿ ತರೂರ್ ಪ್ರತಿದಾಳಿ ನಡೆಸಿದ್ದಾರೆ. "ಮೋದಿಜೀ, ನೀವೇನಾದರೂ ಅನಾರೋಗ್ಯಕ್ಕೆ ತುತ್ತಾದರೆ ಆಗ ನಿಮಗೆ ಖಿಚಡಿಯೇ ಬೇಕಾಗುತ್ತದೆ, ಹಾಗಾಗಿ ಮಹಾಘಟಬಂಧನ್ ಬಗೆಗೆ ಬಿಜೆಪಿ ಬೆಂಬಲಿಗರು ಮಾತನಾಡುವಾಗ ಒಮ್ಮೆ ಯೋಚಿಸಿರಿ" ಎಂದಿದ್ದಾರೆ.
ಜಾರ್ಖಂಡ್ ನಲ್ಲಿನ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಮಾತನಾಡಿ "ಮಹಾಘಟಬಂಧನ್ ನಾಯಕರಿಗೆ ಕೇಂದ್ರದಲ್ಲಿ ಬಹುಮತದ ಸರ್ಕಾರ ಬರುವುದು ಬೇಡವಾಗಿದೆ, ಅವರಿಗೆ ಕಾಂಗ್ರೆಸ್ ಜತೆ ಸೇರಿ ಖಿಚಡಿ ಸರ್ಕಾರ ರಚನೆ ಮಾಡುವ ಹಂಬಲವಿದೆ" ಎಂದಿದ್ದಾರೆ.
ಈ ಕುರಿತಂತೆ ಪ್ರತಿದಾಳಿ ನಡೆಸಿದ ತರೂರ್ "ಬಿಜೆಪಿಯವರ ಬಹುಸಂಖ್ಯಾತರ ಓಲೈಕೆಯ ಹಾಗೂ ವಿಭಜಿತ ರಾಜಕೀಯದ ಕುರಿತು ಜನರು ನಿರಾಶರಾಗಿದ್ದಾರೆ. ಬಿಜೆಪಿ ಬೆಂಬಲಿಗರು ವಿರೋಧಿಗಳನ್ನು ಹಳಿಯಲು ಬೇರೆ ಬೇರೆ ಪದಪುಂಜಗಳನ್ನು ಬಳಸಿದ್ದಾರೆ. ಬಿಜೆಪಿ ದೃಷ್ಟಿಕೋನವನ್ನು ಟೀಕಿಸುವವರೆಲ್ಲಾ ರಾಷ್ಟ್ರದ್ರೋಹಿಗಳಾಗುತ್ತಾರೆ, ಅವರೆಲ್ಲಾ "ತುಕ್ಡೇ ತುಕ್ಡೇ ಗ್ಯಾಂಗ್" ನವರಾಗುತ್ತಾರೆ. ನರೇಂದ್ರ ಮೋದಿ ಮತ್ತು ಅವರ ಬೆಂಬಲಿತರು ವಿರೋಧಿಗಳನ್ನು ಸುಳ್ಲು ಹೇಳುವ ಮೂಲಕ ತಪ್ಪಾಗಿ ಬಿಂಬಿಸುವುದರಲ್ಲಿ ನಿಷ್ಣಾತರಿದ್ದಾರೆ.  ಇಂತಹಾ ಸುಳ್ಳು ನಿರೂಪಣೆಗೆ ಸಂಬಂಧಿಸಿದ ದಾಖಲೆಗಳನ್ನು ಅವರು ನೀಡಬೇಕಿದೆ" ತರೂರ್ ಪಿಟಿಐಗೆ ತಿಳಿಸಿದ್ದಾರೆ.
ಭಾರತದ ಸಶಸ್ತ್ರ ಪಡೆಗಳನ್ನು ರಾಜಕೀಯದಿಂದ ದೂರವಿಡಬೇಕಿದೆ, ಆದರೆ ಪ್ರಧಾನಿಗಳು ತಾವೇ ರಾಷ್ಟ್ರದ ರಾಷ್ಟ್ರೀಯ ಭದ್ರತೆಯ ಅಂತಿಮ ರಕ್ಷಕ  ಎಂದು ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ಬಿಜೆಪಿಯವರು 2014 ರ ಚುನಾವಣಾ ಪ್ರಚಾರದಲ್ಲಿ ಹೇಳಿದಂತೆ "ಅಚ್ಚೇ ದಿನ್" ಆಗಮನಕ್ಕಾಗಿ ದೇಶದ ಸಾಮಾನ್ಯ ಪ್ರಜೆ ಇನ್ನೂ ಕಾಯುತ್ತಲೇ ಇದ್ದಾನೆ. 
"ಮೇ 23 ರಂದು ಬಿಜೆಪಿಗೆ ಹೊರಹೋಗಲು ಬಾಗಿಲನ್ನು ತೋರಿಸಲಿದೆ, ಆ ಮೂಲಕ ದೇಶವು ಅನಾರೋಗ್ಯಕರ ರಾಜಕೀಯ ವನ್ನು ಗುಣಪಡಿಸಿಕೊಳ್ಳಲಿದೆ. ಇದರಲ್ಲಿ ನನಗೆ ಸಂದೇಹವಿಲ್ಲ" ತರೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com