ಮಳವಳ್ಳಿ: ತೀವ್ರ ಪೈಪೋಟಿಗೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜೊತೆಗೆ ಬಹಿರಂಗ ಚರ್ಚೆಗೆ ಸದಾ ಸಿದ್ಧವಿರುವುದಾಗಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಅಂತರಹಳ್ಳಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸುಮಲತಾ ಅಂಬರೀಷ್ ನಿತ್ಯ ಮಾಡುವ ಆರೋಪ ಕೇಳಿ ಕೇಳಿ ಸುಸ್ತಾಗಿದೆ.ಸುಮಲತಾ ಅಂಬರೀಷ್ ಬರೀ ಆರೋಪ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ.ನಮ್ಮದು ಅಭಿವೃದ್ಧಿ ಅಜೆಂಡಾ ಆಗಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಯಾವಾಗ ಬೇಕಾದರೂ ಸಿದ್ಧವಿರುವುದಾಗಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ನಿಖಿಲ್ ಎಲ್ಲಿದ್ದಿಯಪ್ಪಾ ಟ್ರೋಲ್ ಆಗಿ ಜನ ಎಂಜಯ್ ಮಾಡುತ್ತಿದ್ದಾರೆ.ಆದರೂ ನನ್ನ ಮನಸ್ಸಿಗೆ ಯಾವುದೇ ರೀತಿಯ ನೋವಾಗಿಲ್ಲ,ಹಾಗಂತ ಮನೆಯಲ್ಲಿ ಕೂರುವುದಿಲ್ಲ, ಮಂಡ್ಯ ಜನತೆ ತಮ್ಮ ಜೊತೆಗಿರುವುದಾಗಿ ನಿಖಿಲ್ ಹೇಳಿದರು.
ಇನ್ನೂ ಯಶ್ ಬಾಡಿಗೆ ಮನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ಎರಡು ಸಿನಿಮಾ ಮಾಡಿದ್ದವರಿಗೆ ಬೆಲೆ ಇಲ್ಲವೇ ? ನಾನು ಸಿನಿಮಾಕ್ಕೆ ಬೆಲೆ ಕೊಡುವುದಿಲ್ಲ, ಜನರಿಗೆ ಬೆಲೆ ಕೊಡುತ್ತೀನಿ. ಏಪ್ರಿಲ್ 19 ರಂದು ನಡೆಯುವ ಚುನಾವಣೆಯಲ್ಲಿ ಎಲ್ಲದಕ್ಕೂ ಮಂಡ್ಯ ಜನರು ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.
Advertisement