ಜೆಡಿಎಸ್ ಕಳ್ಳರ ಪಕ್ಷ ಎಂದಿಲ್ಲ: ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ
ಮಂಡ್ಯ: ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇರುವಂತೆಯೇ ಮಂಡ್ಯ ಲೋಕಸಭಾ ಅಖಾಡದಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ನಡುವಿನ ಆರೋಪ, ಪ್ರತ್ಯಾರೋಪ ತಾರಕಕ್ಕೇರಿದೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಹಳ್ಳಿ ಹಳ್ಳಿಗೂ ಹೋಗಿ ಅಬ್ಬರದ ಪ್ರಚಾರ ನಡೆಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೆಂಡಾಮಂಡಲವಾಗಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ , ಯಾವನೊ ಅವನು ಯಶ್, ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ, ಇನ್ನೂ ಗೊತ್ತಿಲ್ಲ, ನನ್ನಗೋಸ್ಕರ ಕಾರ್ಯಕರ್ತರು ಸುಮ್ಮನಿದ್ದಾರೆ ಇಲ್ಲದಿದ್ದರೆ, ಕಥೆ ಬೇರೆ ಇರುತಿತ್ತು ಎಂದು ಧಮ್ಕಿ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯಶ್, ನಾವೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ, ಯಾರಾದರೂ ಒಬ್ಬರು ನಾನು ಆ ಬಗ್ಗೆ ಮಾತನಾಡಿದ್ದೀನಿ ಎಂದು ಸಾಕ್ಷಿ ತೋರಿಸಿದರೆ ಅವರು ಏನು ಹೇಳಿದರೂ ನಾನು ಕೇಳ್ತಿನಿ . ಆ ಬಗ್ಗೆ ನನ್ನಲ್ಲಿ ಸ್ಪಷ್ಟತೆಯಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ದ್ಯಾಪಸಂದ್ರ ಗ್ರಾಮದಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ ಯಶ್, ಜೆಡಿಎಸ್ ಪಕ್ಷದಲ್ಲೂ ನನಗೆ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಹಾಗಿದ್ದರೆ ನಾನು ಅವರ ಪಕ್ಷದಲ್ಲಿರುವ ನನ್ನ ಸ್ನೇಹಿತರಿಗೆ ಕಳ್ಳರು ಎನ್ನಲು ಆಗುತ್ತದೆಯಾ? ಸುಮ್ಮನೆ ಈ ವಿಚಾರದಲ್ಲಿ ಯಾರೋ ಕುಮಾರಸ್ವಾಮಿಗೆ ತಪ್ಪಾಗಿ ತಿಳಿಸಿರಬೇಕು, ನಾವೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ ಎಂದು ಯಶ್ ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ