ಕರ್ನಾಟಕ
ಕೂಸು ಹುಟ್ಟುವ ಮುನ್ನವೇ ಕುಲಾವಿ: 'ಫಲಿತಾಂಶಕ್ಕೆ ಮುಂಚೆಯೇ ನಿಖಿಲ್ ಸಂಸದ!
ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬ ಗಾದೆ ಮಾತಿನಂತೆ ಫಲಿತಾಂಶಕ್ಕೆ ಮುಂಚೆಯೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಂಸದರಾಗಿದ್ದಾರೆ.
ಮಂಡ್ಯ: ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬ ಗಾದೆ ಮಾತಿನಂತೆ ಫಲಿತಾಂಶಕ್ಕೆ ಮುಂಚೆಯೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಂಸದರಾಗಿದ್ದಾರೆ. ಫಲಿತಾಂಶ ಪ್ರಕಟಣೆಗೆ ಇನ್ನೂ ಒಂದೂ ತಿಂಗಳಿಗೂ ಅಧಿಕ ದಿನಗಳು ಬಾಕಿ ಇದ್ದರೂ ಆಗಲೇ ನಿಖಿಲ್ ಕುಮಾರಸ್ವಾಮಿ ಸಂಸದರಾಗಿಬಿಟ್ಟಿದ್ದಾರೆ.
ಹೀಗೊಂದು ನಾಮಫಲಕವನ್ನು ನಿಖಿಲ್ ಅಭಿಮಾನಿಯೊಬ್ಬರು ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹರಿಯಬಿಟ್ಟಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ. ಕರ್ನಾಟಕ ಜೆಡಿಎಸ್ ಫೇಸ್ ಬುಕ್ ಪೇಜ್ ನಲ್ಲಿ ಈ ಬೋರ್ಡ್ ರಾರಾಜಿಸುತ್ತಿದೆ. ನಿಖಿಲ್ ಅಭಿಮಾನಿಯೊಬ್ಬರು ಈ ಉಡುಗೊರೆ ನೀಡಿದ್ದಾರೆ ಎಂದು ಅಡಿಬರಹದಲ್ಲಿ ಈ ಚಿತ್ರವನ್ನು ಹಾಕಲಾಗಿದೆ. ಸುಮಲತಾ ಅಂಬರೀಷ್ ಅವರ ಫೇಸ್ ಬುಕ್ ಪೇಜ್ ನಲ್ಲೂ ಈ ಬೋರ್ಡ್ ಹಾಕಲಾಗಿದ್ದು, ಎಲ್ಲೊ ಹೋಗ್ಬಿಟ್ರಿ ಎಂದು ವ್ಯಂಗ್ಯ ಮಾಡಲಾಗಿದೆ.
ಚುನಾವಣೆ ಅಧಿಸೂಚನೆ ಪ್ರಕಟಣೆಗೂ ಮುನ್ನದಿಂದಲೂ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದ ಮಂಡ್ಯದಲ್ಲಿ ಮತದಾನವ ಮರುದಿನವೇ ಹಲವಾರು ಬೆಳವಣಿಗೆಗಳು ನಡೆದಿವೆ. ಅಲ್ಲಲ್ಲಿ ಬೆಟ್ಟಿಂಗ್ ಭರಾಟೆಯೂ ಕಂಡುಬರುತ್ತಿದೆ.
ನಿಖಿಲ್ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಯೊಬ್ಬರು 90 ಸಾವಿರ ಬೆಟ್ಟಿಂಗ್ ಕಟ್ಟಿದ್ದರೆ, ಸುಮಲತಾ ಅಂಬರೀಷ್ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿಯೊಬ್ಬರು 1 ಲಕ್ಷ ರೂಪಾಯಿ ಬೆಟ್ಟಿಂಗ್ ಕಟ್ಟಿರುವುದಾಗಿ ತಿಳಿದುಬಂದಿದೆ. ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶವೂ ತೀವ್ರ ಕುತೂಹಲ ಕೆರಳಿಸಿದೆ