

ಐಪಿಎಲ್ನಲ್ಲಿ ರಾಜಕೀಯ ನುಸುಳಿದ್ದು ಗೊತ್ತೇ ಇದೆ. ರಾಜಕೀಯದಲ್ಲಾದಂತೆ ಭ್ರಷ್ಟಾಚಾರ ತಾಂಡವವಾಡಿದೆ. ಅಧಿಕಾರ ದುರ್ಬಳಕೆಯೂ ಜಗಜ್ಜಾಹೀರಾಗಿದೆ. ಹಾಗಾಗಿ ರಾಜಕಾರಣಿಗಳನ್ನೇ ಮುಂದಾಳಾಗಿಟ್ಟುಕೊಂಡು 'ಇಂಡಿಯನ್ ಪೊಲಿಟಿಕಲ್ ಲೀಗ್' ಅಂತ ಶುರುಮಾಡಿದರೆ ಹೇಗಿರಬಹುದು? ಲೀಗ್ನಲ್ಲಿ ಹೇಗೆ ದೇಶಬೇಧವಿಲ್ಲವೋ ಹಾಗೇ ಇಲ್ಲಿಯೂ ಪಕ್ಷಬೇಧವಿಲ್ಲ. ಯಾವ ಪಕ್ಷ ಫೈನಲ್ಗೆ ಬರಬಹುದು? ಯಾವ ರಾಜಕಾರಣಿ ತಂಡವನ್ನು ನಿಭಾಯಿಸುವಲ್ಲಿ ಗಟ್ಟಿಗ? ಎಂಬಿತ್ಯಾದಿ ರೀತಿಯಲ್ಲಿ ತಲೆಗೆ ಹುಳು ಬಿಟ್ಟುಕೊಂಡಾಗ ಇವರೆಲ್ಲರ ನೆನಪಾಗುತ್ತದೆ... ಹಾಗೇ ಸುಮ್ಮನೆ!
ಕೋಲ್ಕತ್ತಾ ನೈಟ್ ರೈಡರ್ಸ್ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಎರಡು ಬಾರಿ ರೇಲ್ವೇ ಸಚಿವೆಯಾಗಿ ಅನುಭವ ಹೊಂದಿರುವವರು. ಪಶ್ಚಿಮ ಬಂಗಾಳ ಭಾಗದ ಪ್ರಭಾವಿ ರಾಜಕಾರಣಿ. ಹಾಗಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ಗೆ ಕ್ಯಾಪ್ಟನ್ ಆಗಬಲ್ಲರು. ಇವರಿಗೆ ಕೋಚ್ ಬೇಕೆಂದರೆ ಹೇಗಿದ್ದರೂ ಸೌರವ್ ಗಂಗೂಲಿ ಇದ್ದಾರೆ. ಅವರ ಸಲಹೆ ಪಡೆಯಬಹುದು.
ಕಿಂಗ್ಸ್ ಇಲೆವೆನ್ ಪಂಜಾಬ್ ಅರುಣ್ ಜೇಟ್ಲಿ
ವಾಣಿಜ್ಯ, ಕೈಗಾರಿಕೆ, ಕಾನೂನು ಹಾಗೂ ನ್ಯಾಯಾಂಗ ಯೂನಿಯನ್ ಮಂತ್ರಿಯಾಗಿ ಅನುಭವವಿರುವ ಅರುಣ್ ಜೇಟ್ಲಿ ರಾಷ್ಟ್ರ ಬಿಜೆಪಿಯಲ್ಲಿ ಸದ್ದು ಮಾಡಿದವರು. ಪಂಜಾಬ್ ಭಾಗದ ಅತಿ ಪ್ರಭಾವಿ ರಾಜಕಾರಣಿ. ಹೀಗಾಗಿ, ಅಲ್ಲಿನ ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಕ್ಯಾಪ್ಟನ್ ಮಾಡಬಹುದು.
ಚೆನೈ ಸೂಪರ್ ಕಿಂಗ್ಸ್ ಜಯಲಲಿತಾ
ತಮಿಳರ ನಾಯಕಿ ಜಯಲಲಿತಾ ದೇಶದ ಕೆಳಗಿದ್ದೇ ಮೇಲಿನವರ ಜುಟ್ಟು ಹಿಡಿಯಬಹುದಾದ ಶಕ್ತಿವಂತೆ! ಚೆನ್ನೈನ ಅಮ್ಮನ ರಾಜಕಾರಣದ ಐಪಿಎಲ್ಗೆ ಸೂಪರ್ ಕ್ವೀನ್. ತಾನಿಲ್ಲದೆ ಯಾವ ಪಕ್ಷವೂ ಅಧಿಕಾರಕ್ಕೇರಲು ಸಾಧ್ಯವಿಲ್ಲ ಎಂದೇ ಬೀಗುತ್ತಿರುವ ಜಯಲಲಿತಾ ಪ್ರಧಾನಿ ಕುರ್ಚಿಯನ್ನು ಹದ್ದಿನ ಕಣ್ಣಲ್ಲಿ ನೋಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಧೋನಿ ರೀತಿಯ ಗಾಂಭೀರ್ಯ, ಮೌನಗಳು ಇವರಲ್ಲೂ ಇವೆ ಅಂತನ್ನಿಸುತ್ತದೆ.
ಡೆಲ್ಲಿ ಡೇರ್ ಡೆವಿಲ್ಸ್ ಅರವಿಂದ ಕೇಜ್ರಿವಾಲ್
ರಾಜಕೀಯದ ಅನುಭವ ಅಷ್ಟಿಲ್ಲದಿದ್ದರೂ ಮುಖ್ಯಮಂತ್ರಿ ಪದವಿಗೇರಿ, ಆಪ್ನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ಕೇಜ್ರಿವಾಲ್ರ ಚಾಣಾಕ್ಷತೆ ಕಮ್ಮಿಯೇನಲ್ಲ. ಡೆಲ್ಲಿ ಇವರಿಗೆ ಹೋಮ್ ಪಿಚ್. ಪಾರ್ಲಿಮೆಂಟ್ ಕೂಡ ಅಲ್ಲೇ ಹತ್ತಿರವಿದೆ. ಈಗಾಗಲೇ ಡೆಲ್ಲಿಯಲ್ಲಿ ಇವರು ಪ್ರಬಲ ತಂಡವನ್ನೇ ಕಟ್ಟಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಸುಂಧರಾ ರಾಜೆ
ರಾಜಸ್ಥಾನದ ಸಿಎಂ ಆಗಿರುವ ವಸುಂಧರಾ, ಅಲ್ಲೀಗ ಪ್ರಬಲ ತಂಡವನ್ನೇ ಕಟ್ಟಿದ್ದಾರೆ. ಒಟ್ಟು 25 ಕ್ಷೇತ್ರಗಳಲ್ಲಿ ಕಮ್ಮಿಯೆಂದರೂ 20 ಸ್ಥಾನಗಳನ್ನು ಗೆಲ್ಲಿಸಿಯೇ ಕೊಡುವ ಭರವಸೆಯನ್ನೂ ರಾಜೆ ನೀಡಿದ್ದಾರೆ. ತಂಡದ ಪ್ರತಿ ಸದಸ್ಯ ಆಟಗಾರನನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮಹತ್ವದ ಗುಣ ಇವರಲ್ಲಿದೆ. ಕಳೆದ ಸಲದ ರಾಜಸ್ಥಾನ ರಾಯಲ್ಸ್ನ ಕ್ಯಾಪ್ಟನ್ ರಾಹುಲ್ ದ್ರಾವಿಡ್ ರೀತಿಯೇ ಇವರೂ ಫ್ರೆಂಡ್ಲಿ ನಾಯಕ.
ಮುಂಬೈ ಇಂಡಿಯನ್ಸ್ ಮನೋಹರ್ ಜೋಷಿ
ಒಂದೊಮ್ಮೆ ಸಿಎಂ ಕೂಡ ಆಗಿದ್ದ ಮನೋಹರ್, ಈ ಬಾರಿ ಮಹಾರಾಷ್ಟ್ರದಲ್ಲಿ ಉತ್ತಮ ತಂಡವನ್ನೇ ಕಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ಟೀಂನ ಚುಕ್ಕಾಣಿಯನ್ನು ಇವರಿಗೇ ಕೊಡಬಹುದು. ಪಕ್ಕದಲ್ಲೇ ಪುಣೆ ವಾರಿಯರ್ಸ್ ರೀತಿ ಶಿವಸೇನೆ ಇದ್ದರೂ, ಈ ಬಾರಿ ಅಲ್ಲಿನ ಹವಾ ಮುಂಬೈ ಇಂಡಿಯನ್ಸ್ನದ್ದೇ.
ಸನ್ರೈಸರ್ಸ್ ಹೈದರಾಬಾದ್ ಚಂದ್ರಬಾಬು ನಾಯ್ಡು
ಟಿಡಿಪಿ ಎಂಬ ತಮ್ಮದೇ ಪಕ್ಷ ಕಟ್ಟಿಕೊಂಡಿರುವ ಚಂದ್ರಬಾಬು ನಾಯ್ಡು ಸನ್ರೈಸರ್ಸ್ ತಂಡದ ನಾಯಕನಾಗಲು ಎಲ್ಲಾ ಅರ್ಹತೆ ಹೊಂದಿರುವ ನಿಪುಣ ರಾಜಕಾರಣಿ. ಬಹುಬಲದ ಪಕ್ಷದೊಂದಿಗೆ ಗುರುತಿಸಿಕೊಂಡು ರಾಜ್ಯ ಅಭಿವೃದ್ಧಿಯ ಕನಸು ಕಾಣುತ್ತಿರುವ ಚಂದ್ರಬಾಬು, ಅಧಿಕಾರದಲ್ಲಿದ್ದಾಗ ಹಲವು ಯೋಜನೆಗಳ ಸಿಕ್ಸರ್ ಬಾರಿಸಿದವರು.
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಅನಂತ ಕುಮಾರ್
ಸದ್ಯದ ಸ್ಥಿತಿಯಲ್ಲಿ ಕರ್ನಾಟಕದ ತಂಡವನ್ನು ನಿಭಾಯಿಸುವಲ್ಲಿ ಅನಂತಕುಮಾರ್ ಸಮರ್ಥರೆನಿಸುತ್ತಾರೆ. ಕೇಂದ್ರ ರಾಜಕಾರಣದಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿರುವ ರಾಜ್ಯದ ರಾಜಕಾರಣಿ ಎಂದರೆ ಅನಂತಕುಮಾರ್. ತಂಡದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗದಿದ್ದರೂ ಮೋದಿ ಅಲೆ ಇವರ ಪರವಿದೆ. <
ಹೆಚ್ಚು ಬಾರಿ ಚರ್ಚೆಗೊಳಗಾದವರು...
ಈಗಾಗಲೇ ಹಲವೆಡೆ ಎಲೆಕ್ಷನ್ ಮುಗಿದಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಕ್ಷಣಗಣನೆ ಶುರುವಾಗಿದೆ. ಈ ಒಂದು ವಾರದಲ್ಲಿ ಯಾರು ಹೆಚ್ಚು ಬಾರಿ ಚರ್ಚೆಗೊಳಗಾಗಿದ್ದಾರೆ? ಸಿಎನ್ಎನ್- ಐಬಿಎನ್ ನಡೆಸಿದ ಒಂದು ಸಮೀಕ್ಷಾ ಚಿತ್ರ ಇಲ್ಲಿದೆ...
-ಮಂಜು
Advertisement