ಹಸಿವು, ಬಡತನಗಳ ಬೇಗೆಯಿಂದ ತನ್ನನ್ನು, ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು, ತನ್ನ ಆದಾಯದ ಮಿತಿಯನ್ನರಿತು ಸಾಲ ಮಾಡುವುದು ಹಲವು ಬಾರಿ ಅನಿವಾರ್ಯವಾಗಬಹುದು. ಜಾಗರೂಕತೆಯಿಂದ ಇಂತಹ ಸಣ್ಣ ಪುಟ್ಟ ಋಣದಿಂದ ಹೊರ ಬರುವವನು ಜಾಣ. ವಿಲಾಸೀ ಜೀವನ, ವ್ಯಸನಗಳು, ತೋರಿಕೆಯ ಆಡಂಬರ, ಅರ್ಥಹೀನ ಡಂಬಾಚಾರಗಳು, ತನ್ನ ಯೋಗ್ಯತೆಗೆ ಮೀರಿದ ಐಷಾರಾಮವನ್ನು ದಕ್ಕಿಸಿಕೊಳ್ಳಲು, ಮುಂದಾಲೋಚನೆ ಇಲ್ಲದೆ ಮಾಡುವ ಸಾಲ ಸ್ವಯಂಕೃತ ಅಪರಾಧ. ಇಂತಹವರು ತಮ್ಮ ಹೀನ ಸ್ಥಿತಿಗೆ ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ಇವೆರಡಕ್ಕಿಂತ ಅಪಾಯಕಾರಿ ಎಂದರೆ, ತಮ್ಮ ಅಧಿಕಾರ ಲೋಲುಪತೆ, ಸ್ವಾರ್ಥ ಸಾಧನೆಗಳಿಗಾಗಿ ಇಡೀ ದೇಶದ ಜನತೆಯನ್ನು ಋಣದ ಕೂಪಕ್ಕೆ ತಳ್ಳಿ, ಅವರು ಪಡುವ ಸಂಕಟಗಳ ಬಗ್ಗೆ ಯಾವ ಪಾಪ ಪ್ರಜ್ಞೆಯೂ ಇಲ್ಲದೆ, ದರ್ಪದಿಂದ ಮೆರೆಯುವ ರಕ್ತ ಪಿಪಾಸಿಗಳದ್ದು. ಈ ಮೂರನೆಯ ಪ್ರಕಾರದ ಋಣದ ಮೇಲೆ ಜನ ಸಾಮಾನ್ಯರಿಗೆ ಯಾವ ಹಿಡಿತವಾಗಲೀ, ಆಯ್ಕೆಯಾಗಲೀ ಇರುವುದಿಲ್ಲ. ನೂರಾರು ವರ್ಷಗಳಿಂದ ಅತ್ಯಂತ ಸರಳವಾಗಿ, ಸಹಜವಾಗಿ, ಸುಲಭವಾಗಿ ದೊರೆಯುತ್ತಿದ್ದ ಆಹಾರ ಮತ್ತು ಇತರೇ ಅತ್ಯಾವಶ್ಯಕ ಪದಾರ್ಥಗಳು ಕೈಗೆಟುಕದಂತಾಗಿ, ಎಲ್ಲಿಂದಲೋ ಹೇರಲ್ಪಟ್ಟ, ನಮಗೆ ಒಗ್ಗದ, ಒಲ್ಲದ, ಬೇಕಿಲ್ಲದ ವಸ್ತುಗಳಿಗೆ ನುರಾರು ಪಟ್ಟು ಹಣ ತೆರಲೇಬೇಕಾಗುವ ಅನಿವಾರ್ಯತೆಯನ್ನು ಸೃಷ್ಟಿಸಿರುವ ಈ ವಿಷಜಂತುಗಳು ಯಾರೆಂದು ಭೂತ ಕನ್ನಡಿ ಹಿಡಿದು ನೋಡ ಬೇಕಿಲ್ಲ.
ಹಾಸ್ಯ, ವಿಡಂಬನೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಎಚ್ಚರಿಕೆಯ ಗಂಟೆಯನ್ನು ಬಾರಿಸುವ ನಾಟಕ ಋಣವೆಂಬ ಸೂತಕವು. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕೆಲಸವನ್ನು ಕಳೆದುಕೊಂಡು, ಕ್ರೆಡಿಟ್ ಕಾರ್ಡಿನ ಜಾಲದಲ್ಲಿ ಸಿಲುಕಿ ಪರದಾಡುತ್ತಿರುವ ಸಮಯದಲ್ಲಿ ರಮ, ರಂಗಸ್ವಾಮಿ ದಂಪತಿಗಳ ನೆರವಿಗೆ ಬರುವವರೆಲ್ಲ ಅವರ ಋಣದ ಭಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಹೆಚ್ಚಿಸುವ ಸೂಚನೆಗಳೇ ಕಂಡುಬರುತ್ತದೆ. ಅವುಗಳನ್ನೆಲ್ಲ ತಿರಸ್ಕರಿಸಿ, ಸರಳ ಬದುಕಿಗೆ ತಮ್ಮದೇ ಆದ ಸೂತ್ರವನ್ನು ಕಂಡುಕೊಳ್ಳುವ ನಿರ್ಧಾರ ಮಾಡುತ್ತಾರೆ, ಈ ದಂಪತಿಗಳು.