ನನ್ನಪ್ಪ... ಮಂಜಲ್ಲಿ ಮಂಜಾದ ಮಂಜು..

ಅಂದು ಸಮಯ ಮಾಯಾ ಆಗುತ್ತಲಿತ್ತು.. ಸುಮಾರು ೩೮ ವಸಂತಗಳಿಂದ ಕಂಡ ನನ್ನ ಆತ್ಮದ ಒಡೆಯ.. ಸಾಕು ಇನ್ನು ಎಂದು ಹೊರಟಿದ್ದ ಸಮಯ...
ಅಪ್ಪನೊಂದಿಗೆ ಶ್ರೀಕಾಂತ್ ಮಂಜುನಾಥ್
ಅಪ್ಪನೊಂದಿಗೆ ಶ್ರೀಕಾಂತ್ ಮಂಜುನಾಥ್
Updated on

ಅಂದು ಸಮಯ ಮಾಯಾ ಆಗುತ್ತಲಿತ್ತು.. ಸುಮಾರು ೩೮ ವಸಂತಗಳಿಂದ ಕಂಡ ನನ್ನ ಆತ್ಮದ ಒಡೆಯ.. ಸಾಕು ಇನ್ನು ಎಂದು ಹೊರಟಿದ್ದ ಸಮಯ..

ಅಲ್ಲಿದ್ದ ವೈದ್ಯರು.. ತಮ್ಮ ಗಡಿಯಾರ ನೋಡುತ್ತಲಿದ್ದರು.. ಸಂಜೆ ಸುಮಾರು ಐದು ಘಂಟೆ ಸಮಯ.. ವೈದ್ಯರ ಕಣ್ಣಲ್ಲಿ ನೀರು ಮಂದಗತಿಯಲ್ಲಿ ತುಂಬುತ್ತಿತ್ತು.. ಅವರಿಗೆ ತಮ್ಮ ಜ್ಞಾನದ ಮೇಲೆ, ತಮ್ಮ ಅನುಭವದ ಮೇಲೆ ಸಿಟ್ಟು ಬರುತ್ತಿದ್ದ ಸಮಯ ಎಂದು ನನಗೆ ಅನಿಸಿತ್ತು.. ಕಾರಣ.. ತಮ್ಮ ಪ್ರತಿಭೆ, ಶ್ರಮ ಎಲ್ಲವೂ ಆ ಭಗವಂತನ ಕರೆಯ ಮುಂದೆ ಉಪಯೋಗವಿಲ್ಲ ಎಂದು ಅವರಿಗೆ ಅರಿವಾದ ಸಮಯ.

ನಾನು ಆಗಾಗ ಕೈಗೆ ಕಟ್ಟಿದ ಗಡಿಯಾರ ನೋಡುತ್ತಲಿದ್ದೆ..ನನ್ನ ಒಂದು ರೀತಿಯ ತಳಮಳ, ಕೈಗಡಿಯಾರ ನೋಡುವುದು, ವೈದ್ಯರಿಗೆ ಕಾಯುವುದು ಇದೆ ಆಗಿತ್ತು.. ಯಾಕೋ ಕೈ ಗಡಿಯಾರದ ಮೇಲೆ ಜಿಗುಪ್ಸೆ ಬರುತ್ತಿದ್ದ "ಸಮಯ"..

ಕಡೆಗೂ ಆ ಘಳಿಗೆ ಬಂದೆ ಬಿಟ್ಟಿತ್ತು.. ವೈದ್ಯರು ತಲೆ ಅಲ್ಲಾಡಿಸಿದರು.. ನಾನು ಹೃದಯದ ಕದವನ್ನು ಗಟ್ಟಿಯಾಗಿ ಭದ್ರ ಮಾಡಿಕೊಂಡೆ.. ಯಾವುದೇ ಕಾರಣಕ್ಕೂ ಹನಿಗಳ ಪ್ರವಾಹ ಉಕ್ಕ ಬಾರದೆಂದು.. ಜೊತೆಯಲ್ಲಿಯೇ ನಿರ್ಧಾರ ಮಾಡಿದೆ.. ಇನ್ನೆಂದೂ ಕೈಗೆ ಗಡಿಯಾರ ಕಟ್ಟುವುದಿಲ್ಲ ಎಂದು..

ಈ ಘಟನೆ ನೆಡೆದು ಸುಮಾರು ಮೂರುವರೆ ವರ್ಷಗಳಾದವು..

ಭಾನುವಾರ ಕಚೇರಿಯ ಕಾರ್ಯ ನಿಮಿತ್ತ ದೆಹಲಿಯಿಂದ ಬೆಂಗಳೂರಿಗೆ ಮರಳುತ್ತಿದ್ದೆ.. ಮೋಡಗಳ ನಡುವೆ ಸೂರ್ಯ ಆಟವಾಡುತ್ತಿದ್ದ.. ಕೂತಿದ್ದ ವಿಮಾನ ಮೋಡಗಳ ಕಡಲಲ್ಲಿ ತೇಲುತ್ತಿತ್ತು.. ಅಚಾನಕ್ ಸೂರ್ಯನ ಪ್ರಭೆ ಕಡಿಮೆ ಆಯಿತು.. ಮೋಡಗಳ ಮಧ್ಯೆ ಒಂದು ಆಕೃತಿ ಉದ್ಭವಿಸಿದ ಅನುಭವ.. ಕಣ್ಣುಗಳು ಎವೆ ಎಕ್ಕದೆ ಆ ಆಕೃತಿಯನ್ನು ನೋಡುತ್ತಲಿತ್ತು..

ಶ್ರೀಕಾಂತ.. ನಿನ್ನ ಸಮಯ ಅಂದು ಸರಿ ಇತ್ತು ಇಂದು ಸರಿ ಇದೆ.. ನಿನ್ನ right ಟೈಮ್ ನಿನ್ನ right hand ನಲ್ಲಿ ಇರಲಿ.. ಇದು ನನ್ನ ಆದೇಶ ಎಂದಿತು.. ಕಣ್ಣುಜ್ಜಿ ಕೊಂಡೆ.. ಕಣ್ಣುಗಳು ಭಾರವಾಗುತ್ತಿದ್ದವು.. ಮನಸ್ಸಲ್ಲೇ ಹೇಳಿದೆ.. "ಅಣ್ಣಾ ನಿಮ್ಮ ಮಾತು ನನಗೆ ವೇದವಾಕ್ಯ.. ಆಗಲಿ.. ಸಮಯ ಸುಂದರಮಯವಾಗಲಿ ನಿಮ್ಮ ನೆನಪು ಹೃದಯದಿಂದ ಬಲಗೈಗೆ ಹರಿಯುತ್ತಿದೆ.. ಖಂಡಿತ ನಿಮ್ಮ ಮಾತನ್ನು ನೆರವೇರಿಸುತ್ತೇನೆ"

ಮನೆಗೆ ಬಂದೆ.. ಅಪ್ಪ ತಮ್ಮ ಕಡೆಯ ಆರೇಳು ವರ್ಷಗಳು ಕಟ್ಟಿಕೊಂಡ ಕೈಗಡಿಯಾರವನ್ನು ಜೋಪಾನವಾಗಿ ಎತ್ತಿಟ್ಟಿದ್ದೆ.. ಅದನ್ನು ತೆಗೆದು ನೋಡಿದೆ.. ಶೀತಲವಾಗಿಲ್ಲ ಎಂದು ನನ್ನ ಮನಸ್ಸು ಹೇಳಿತು.. ಸೀದಾ ನಡೆದೆ ಗಡಿಯಾರ ರಿಪೇರಿ ಅಂಗಡಿಗೆ.. ಸಂಕೋಚದಿಂದಲೇ ಅವರಿಗೆ ಕೈಗಡಿಯಾರ ಕೊಟ್ಟೆ.. ಮತ್ತು ನನ್ನ ಮತ್ತು ಆ ಗಡಿಯಾರದ ಭಾವನಾತ್ಮಕತೆಯ ಬಗ್ಗೆ ಹೇಳಿದೆ..

ಆಟ ನಸು ನಕ್ಕು "ಸಾರ್ ಏನೂ ಯೋಚನೆ ಬೇಡ.. ಬ್ಯಾಟರಿ ಬದಲಾಯಿಸಿದರೆ ಸರಿ ಹೋಗುತ್ತದೆ.. ಎಂದು ಮುಂದಿನ ಹತ್ತು ನಿಮಿಷದಲ್ಲಿ ಅಪ್ಪ ಕೈಗಡಿಯಾರದ ರೂಪದಲ್ಲಿ ನನ್ನ ಬಲಗೈ ಮಣಿಕಟ್ಟನ್ನು ಅಲಂಕರಿಸಿದ್ದರು.. ಗಡಿಯಾರದ ಮುಳ್ಳುಗಳನ್ನು ನೋಡಿದೆ.. ನಾ ಇದ್ದೇನೆ ಈ ಅಣ್ಣಾವ್ರ ಹಾಡು ನಿನಗಾಗಿ .. "ಈ ಸಮಯ ಆನಂದಮಯ ನೂತನ ಬಾಳಿನ ಶುಭೋದಯ".. ಎಂದಿತು ಆ ಧ್ವನಿ..

ಹೌದು ನನ್ನ ಅಪ್ಪ ನನಗೆ ಅರಿವಿಲ್ಲದೆ ನನ್ನ ಒಳಗೆ ಕೂತು ಅನೇಕ ಲೇಖನಗಳನ್ನು ಬರೆಸುತ್ತಾ ಇದ್ದಾರೆ.. ನನಗೆ ಏನೂ ಹೊಳೆಯೋಲ್ಲ.. ಹೊಳೆಯುತ್ತಿಲ್ಲ ಎಂದಾಗ.. ಅಪ್ಪನನ್ನು ಒಮ್ಮೆ ಕಣ್ಣ ಮುಂದೆ ತಂದುಕೊಂಡರೆ ಸಾಕು.. ಅದೆಲ್ಲಿಂದ ಸ್ಫೂರ್ತಿ ಬರುತ್ತದೆಯೋ ಅರಿಯದು. ಅವರೊಡನೆ ಇದ್ದಷ್ಟು ವರ್ಷಗಳು ನೆನಸಿಕೊಂಡಾಗ ಅವರು ನನಗೆ ಜೊತೆಯಲ್ಲಿ ಅಣ್ಣ ಅಕ್ಕ ತಮ್ಮರಿಗೆ ಬುದ್ದಿ ಹೇಳಿದ್ದು ಅಥವಾ ಹೀಗೆ ನಡೆಯಬೇಕು ಎಂದು ಹೇಳಿದ್ದು ನೆನಪಿಲ್ಲ.. ಅವರು ತಮ್ಮ ಬದುಕನ್ನು ಬದುಕಿ ನಮಗೆ ಪಾಠ ಕಳಿಸಿದರು.. ತಾಳ್ಮೆ, ಶ್ರದ್ಧೆ, ಮೃದು ಮಾತು ಇವುಗಳಿಗೆ ನಾ ಏನಾದರೂ ಒಂದೇ ಹೆಸರು ಇಡಬೇಕೆಂದರೆ ಅದು ಒಂದೇ ಹೆಸರು "ಅಣ್ಣ" (ಅಪ್ಪನ್ನನ್ನು ಅಣ್ಣ ಎನ್ನುತ್ತೇವೆ ನಮ್ಮ ಮನೆಯಲ್ಲಿ)...

ಬೋಧಿಸುವವರು ನೂರಾರು ಸಾವಿರಾರು ಸಿಗುತ್ತಾರೆ.. ಆದರೆ ನನ್ನ ಅಪ್ಪ  ಎಂದಿಗೂ ಪಾಠ ಹೇಳಲ್ಲಿಲ್ಲ, ಹೀಗೆ  ಇರಬೇಕು ಎಂದು ಹೇಳಲಿಲ್ಲ.. ತಾವು ನೆಡೆದರು.. ತಮ್ಮನ್ನು ಹಿಂಬಾಲಿಸುವಂತಹ ಸ್ಫೂರ್ತಿ ಧಾರೆಯ ಮಾರ್ಗವನ್ನು ಸೃಷ್ಠಿಸಿದರು.. ಅವರು ತಮ್ಮ ಮಕ್ಕಳ ಬಗ್ಗೆ ಹೇಳಿದ್ದು ಒಂದೇ ಮಾತು ನೀವು "ಸೂಪರ್ ನನ್ ಮಕ್ಕಳು"

ಇಂದು ನನಗೆ ಬಹಳ ಖುಷಿ ತಂದ ದಿನ.. ಅಪ್ಪ ಹೃದಯದಿಂದ ಕೈಗೆ ಬಂದರೆ..ಅವರ ನಾಡಿ ಮಿಡಿತವನ್ನು ಅನುಭವಿಸಿದ್ದ ಅವರು ಕಟ್ಟಿಕೊಂಡು ಓಡಾಡಿದ ಅದೇ ಕೈಗಡಿಯಾರ ಇಂದು ನನ್ನ ಕೈಯಲ್ಲಿ.. ಇದಕ್ಕಿಂತ ಸ್ಫೂರ್ತಿ ಬೇಕೇ.. ನನ್ನ ಅತ್ಯುತ್ತಮ ಸ್ನೇಹಿತ ನನ್ನ ಅಪ್ಪ.... !

ಅಣ್ಣ ಎಂದರೆ ಅವರೇ ನನ್ನ ಅಪ್ಪಾ.. ಮಂಜಲ್ಲಿ ಮಂಜಾದ ಮಂಜು ಅವರು.. !!!


-ಶ್ರೀಕಾಂತ್ ಮಂಜುನಾಥ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com