
ನನ್ನ ಮಗ ಚಿನ್ಮಯ್ ಕುಮಾರ್ ಈಗ 23ರ ಹರೆಯದ ಚೆಂದದ ಯುವಕ., ವಿದ್ಯೆ ವಿನಯದ ಸಂಗಮದಂತ ವ್ಯಕ್ತಿತ್ವ. ಅವನು ತನ್ನ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿ ವಿಪ್ರೋ ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಆಗಿ ಸೇರಿ ಅಲ್ಲಿ ತನ್ನ ಜೀವನದಲ್ಲಿ ಹಿಂದೆಂದೂ ಅರಿಯದ ವೃತ್ತಿಯಲ್ಲಿ, ಮೊದಲೆಂದೂ ಅನುಭವಿಸಿರದ ಆಯಾಸಕರ ಹಗಲು– ರಾತ್ರಿಯ ಮೂರು ಪಾಳಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವ. ಅವನು ಮಿಕ್ಕವರೆಲ್ಲ ರಾತ್ರಿ ಪಾಳಿ ಅಥವ ದಿನದ ಪಾಳಿಯನ್ನು ಕ್ರಿಕೆಟ್ ಮ್ಯಾಚ್, ಫುಟ್ ಬಾಲ್ ವಿಶ್ವಕಪ್ ಮುಂತಾದ ಯಾವುದೇ ಕಾರಣಕ್ಕೆ ಮಾರ್ಪಾಡು ಬಯಸಿದಾಗ ತನ್ನ ಕ್ರೀಡಾಸಕ್ತಿಯನ್ನೂ ಬದಿಗಿಟ್ಟು ಅವಿರತ ಒಂದೇ ಪಾಳಿಯಲ್ಲಿ ದುಡಿದು ಸಹಕರಿಸಿದವ.
ಅವನಿಗೆ ತನ್ನ ಸಂಸ್ಥೆಯ ನೂರಾರು ಸರಿಸಮಾನರ ಮಧ್ಯೆ `` ಬೆಸ್ಟ್ ಅಚೀವರ್ ಆಫ್ ದಿ ಕ್ವಾರ್ಟರ್''( ತ್ರೈಮಾಸಿಕ ವರ್ಷ ಶ್ರೇಷ್ಟ) ಎಂಬ ಪ್ರಶಸ್ತಿ, ಕಾಣಿಕೆಯೆಲ್ಲ ಬಂದಾಗ ನನ್ನೆದೆ ಸಂತಸದಿಂದ ಉಬ್ಬಿ ಆನಂದ ಭಾಷ್ಪ ಸುರಿಸಿದ್ದಿದೆ. ನನಗೂ ನನ್ನ ವೃತ್ತಿಯಲ್ಲಿ ಅಂತಾ ಪ್ರಶಸ್ತಿ ಬಂದಿರಲಿಲ್ಲ. ನಂತರ ತನ್ನ ಉನ್ನತ ವ್ಯಾಸಂಗಕ್ಕಾಗಿ ಅವನು ಅಂತಾ ಕಷ್ಟಕರ ಪಾಳಿಯ ನಡುವೆಯೂ GRE, TOEFL ಮುಂತಾದ ಪ್ರವೇಶ ಪರೀಕ್ಷೆಗಳಲ್ಲಿ ಗಣನೀಯ ಶ್ರೇಯಾಂಕ ಗಳಿಸಿ ಅಮರಿಕದ ಅತ್ಯುನ್ನತ ಪಟ್ಟಿಯಲ್ಲಿರುವ ಮೇರಿಲ್ಯಾಂಡ್ ವಿಶ್ವವಿದ್ಯಾಲಯಕ್ಕೆ ಇದೀಗ ಕಾಲಿಡುವ ಹಂತದಲ್ಲಿದ್ದಾನೆ. ಅವನಿಂದ ನನ್ನ ಬಹಳ ಕನಸುಗಳು ನನಸಾಗಿವೆ, ಇನ್ನೂ ಆಗುವುದಿದೆ…ಅವನಿಗೆ ಶುಭವಾಗಲಿ.
ನನ್ನ ಮಗಳು ಸನ್ಮತಿ ಹದಿನೇಳು ವರ್ಷವಯಸ್ಸಿನ ಚುರುಕಾದ ತರುಣಿ. ನಗೆಮುಖದ, ನನಗೆ ಸರಿಸಾಟಿಯಾಗಿ ಕೀಟಲೆ ಮಾತಿಗೆ ಹಾಸ್ಯಲೇಪಿತವಾಗಿ ಪ್ರತಿಮಾತು ನೀಡಬಲ್ಲ ಬಾಲೆ. ಶಾಲೆಯಲ್ಲಿ ಭರತನಾಟ್ಯವಾಡಿ ಹಲವು ವರ್ಷಗಳಿಂದಲೂ ಎಲ್ಲರ ಕಣ್ಮಣಿ. ತನ್ನ ಜತೆಯವರಿಗೂ, ಪುಟ್ಟವರಿಗೂ ಡ್ಯಾನ್ಸ್ ಕೋರಿಯೋಗ್ರಫಿ ಮಾಡಿಸಿ ತರಬೇತಿ ನೀಡಿ ನಿರ್ದೇಶಿಸಬಲ್ಲ ಪ್ರವೀಣೆ. ಅವಳ ಸುಂದರ ವೇಷ ಭೂಷಣಗಳಲ್ಲಿ ಸಡಗರದ ನೃತ್ಯಗಳನ್ನು ಕಂಡು ನಾನೂ ಪತ್ನಿಯೂ ಖುಶಿಯಿಂದ ಉಬ್ಬಿಹೋದ ಕ್ಷಣಗಳು ಮರೆಯಲಾಗದಂತವು. ಅವಳು ಉದಯೋನ್ಮುಖ ಇಂಗ್ಲೀಷ್ ಕವಿಯತ್ರಿ ಕೂಡಾ..
ಇತ್ತೀಚಿನ ಅಫ್ಘಾನಿಸ್ತಾನ ಶಾಲಾಮಕ್ಕಳ ಮಾರಣಹೋಮವನ್ನು ತನ್ನದೇ ಆದ ಸಂವೇದನಾಶೀಲ ಪದಗಳಲ್ಲಿ ಜೋಡಿಸಿ ಪ್ರಕಟಿಸಿ ನನ್ನ ಕಚೇರಿಯ ಅಬಾಲ ವೃದ್ಧ ಓದುಗರಿಗೂ ಕಣ್ಣಾಲಿಯಲ್ಲಿ ಕಂಬನಿ ತರಿಸಿದ್ದಾಳೆ. ಒಂದು ಡೈರಿಯ ಸ್ವಗತವೆಂಬ ವಿನೂತನ ಕವನ ವಸ್ತು ಹಿಡಿದು ಡೈರಿ ಮತ್ತು ಲೇಖಕನ ನಡುವಣ ಅವಿನಾಭಾವ ಸಂಬಂಧವನ್ನು ಬೆರಗಾಗುವಂತೆ ಬಿಡಿಸಿದ್ದಾಳೆ.ಅವಳಲ್ಲಿ ಚಿಕ್ಕ ಡೈನಮೈಟಿನಂತಾ ಸುಪ್ತ ಸಾಮರ್ಥ್ಯವಿದೆ. ಮುಂದೆಯೂ ಅವಳ ಬಾಳು ನಂದನವಾಗಲಿ.
-ನಾಗೇಶ್ ಕುಮಾರ್ ಸಿ ಎಸ್.
Advertisement