ವಿನಾಯಕನಿಗೆ ತುಳಸಿ ಅರ್ಪಿಸದಿರಲು ಕಾರಣ?

ಎಲ್ಲಾ ಕಾರ್ಯಗಳಿಗೂ ಮೊದಲು ಪೂಜಿತನಾಗುವ ಏಕದಂತನಿಗೆ ಎಲ್ಲವೂ ವಿಧ್ಯುಕ್ತವಾಗಿಯೇ ಆಗಬೇಕು. ಗಣಪನ ಹಬ್ಬವೆಂದರೆ ಅದೊಂದು ವ್ರತ. ಗಣಪತಿ ಪೂಜೆ ಪದ್ಧತಿ ಹಾಗೂ ಶಿಸ್ತುಬದ್ಧವಾಗಿ ಆದಾಗಲೇ...
ವಿನಾಯಕನಿಗೆ ತುಳಸಿ ಅರ್ಪಿಸದಿರಲು ಕಾರಣ?
ವಿನಾಯಕನಿಗೆ ತುಳಸಿ ಅರ್ಪಿಸದಿರಲು ಕಾರಣ?
Updated on

ಎಲ್ಲಾ ಕಾರ್ಯಗಳಿಗೂ ಮೊದಲು ಪೂಜಿತನಾಗುವ ಏಕದಂತನಿಗೆ ಎಲ್ಲವೂ ವಿಧ್ಯುಕ್ತವಾಗಿಯೇ ಆಗಬೇಕು. ಗಣಪನ ಹಬ್ಬವೆಂದರೆ ಅದೊಂದು ವ್ರತ. ಗಣಪತಿ ಪೂಜೆ ಪದ್ಧತಿ ಹಾಗೂ ಶಿಸ್ತುಬದ್ಧವಾಗಿ ಆದಾಗಲೇ ವಿಘ್ವವಿನಾಶಕನನ್ನು ಒಲಿಸಿಕೊಳ್ಳಲು ಸಾಧ್ಯ.

ಗಣೇಶ ಯಾವುದೇ ಒಂದು ವಿಶಿಷ್ಟ ವರ್ಗ ಅಥವಾ ಪ್ರದೇಶದ ದೇವತೆಯಾಗಿರದೆ ಸಕಲ ಮತ, ಸಕಲ ದೇಶದವರೂ ಪೂಜಿಸಲ್ಪಡುವ ದೇವನಾಗಿದ್ದಾನೆ. ಏಕದಂತ, ಚತುರ್ಭುಜ, ಸಂಕಷ್ಟಹರ, ವಿಚ್ಚಿಷ್ಠ, ವಿತ್ತಿಷ್ಟ, ಬಲಮುರಿ, ಎಡಮುರಿ ಹೀಗೆ ವಿವಿಧ ರೂಪದಲ್ಲಿ ಆರಾಧಿಸುವ ಗಣಪನಿಗೆ ಗರಿಕೆ ಎಂದರೆ ಬಹಳ ಪ್ರೀತಿ...ಆದರೆ, ತುಳಸಿ ವಿನಾಯಕನಿಗೆ ನಿಷಿದ್ಧ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

ತುಳಸಿಯನ್ನು ಪವಿತ್ರ ದೇವತೆ ಎಂದು ಹೇಳಲಾಗುತ್ತದೆ. ತುಳಸಿ ದರ್ಶನದಿಂದ ಪಾಪ ಪರಿಹಾರ, ತುಳಸಿ ಸ್ಪರ್ಶದಿಂದ ಪವಿತ್ರತೆ ಮತ್ತು ಮೋಕ್ಷಪ್ರಾಪ್ತಿ, ತುಳಸಿ ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಾಭ ಎಂದು ತುಳಸಿಗೆ ಭಾರತದಲ್ಲಿ ವಿಶೇಷವಾಗಿ ಪೂಜೆ ಮಾಡುವುದುಂಟು ಇಂತಹ ತುಳಸಿಯು ವಿನಾಯಕನ ಪೂಜೆಯಲ್ಲಿ ಮಾತ್ರ ನಿಷಿದ್ಧ ಎಂದು ಹೇಳುವುದುಂಟು

ಇಷ್ಟಕ್ಕೂ ವಿನಾಯಕನ ಪೂಜೆಯಲ್ಲಿ ತುಳಸಿಗೇಕೆ ನಿಷಿದ್ಧ....
ಒಂದು ಗ್ರಾಮದಲ್ಲಿ ಅತಿಸುಂದರ ಅಪ್ಸರೆಯೊಬ್ಬಳಿದ್ದಳು. ಆಕೆಯು ಒಂದು ದಿನ ಧೀರ ಹಾಗೂ ಸುಂದರ ಪುರುಷನೊಬ್ಬನನ್ನು ವಿವಾಹವಾಗಲು ಇಚ್ಛಿಸಿದ್ದಳು. ವಿವಾಹವಾಗಲು ಉತ್ತಮ ಪುರುಷನಿಗಾಗಿ ದೇವರ ಬಳಿ ನಾನಾ ರೀತಿಯ ಜಪ, ವ್ರತ ಹಾಗೂ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದಳು. ಹೀಗೆ ಒಂದು ದಿನ ಕಾಡಿನ ಮಧ್ಯೆ ಹೋಗುತ್ತಿದ್ದಾಗ ಧ್ಯಾನದಲ್ಲಿ ಮಗ್ನನಾದ ಗಣಪತಿ ಅಪ್ಸರೆಯ ಕಣ್ಣಿಗೆ ಬೀಳುತ್ತಾನೆ.

ಗಣಪತಿಯನ್ನು ಕಂಡೊಂಡನೆಯೇ ಆತನ ಸೌಂದರ್ಯವನ್ನು ಕಂಡ ಅಪ್ಸರೆ ಗಣಪತಿಯನ್ನು ವಿವಾಹವಾಗಲು ಇಚ್ಛಿಸುತ್ತಾಳೆ. ನಂತರ ಧ್ಯಾನಮಗ್ನನಾದ ಗಣಪತಿಯ ಬಳಿ ಹೋಗಿ ಗಣಪತಿಯು ಧ್ಯಾನದಿಂದ ಮೇಲೇಳುವಂತೆ ಮಾಡಲು ಗಣಪತಿಯನ್ನು ನಾನಾ ನಾಮಾವಳಿಗಳಿಂದ ಕೂಗುತ್ತಾಳೆ. ಆಕೆಯ ಕೂಗು ಕೇಳಿದ ಗಣಪನು ಧ್ಯಾನದಿಂದ ಎದ್ದು ಅಪ್ಸರೆಯನ್ನು ಕೇಳುತ್ತಾನೆ. ನನ್ನ ಧ್ಯಾನವನ್ನು ಭಂಗ ಮಾಡಲು ಕಾರಣವೇನು ಎಂದು ಕೇಳುತ್ತಾನೆ.

ಇದಕ್ಕುತ್ತರಿಸಿದ ಅಪ್ಸರೆಯು ನೀನು ನನಗೆ ತುಂಬಾ ಇಷ್ಟವಾಗಿರುವೆ. ನಾನು ನಿನ್ನನ್ನೇ ವಿವಾಹವಾಗುತ್ತೇನೆ ಎಂದು ಹೇಳುತ್ತಾಳೆ. ಅಪ್ಸರೆಯ ಮಾತು ಕೇಳಿದ ಗಣಪನು ವಿವಾಹ ಮಾಡಿಕೊಂಡು ಮೋಹ ಬಂಧನದಲ್ಲಿ ಬಂಧಿತನಾಗಲು ನನಗೆ ಇಷ್ಟವಿಲ್ಲ ಎಂದು ಹೇಳುತ್ತಾನೆ. ಗಣಪನ ಪ್ರತಿಕ್ರಿಯೆಗೆ ಕೆಂಡಾಮಂಡಲವಾದ ಅಪ್ಸರೆಯು ನೀನು ನನ್ನನ್ನು ವಿವಾಹವಾಗಲೇಬೇಕು ಎಂದು ಪಟ್ಟುಹಿಡಿಯುತ್ತಾಳೆ. ಇದಕ್ಕೆ ಕೋಪಗ್ರಸ್ಥನಾಗ ವಿನಾಯಕ ತುಳಸಿಗೆ ನೀನು ಪೃಥ್ವಿಯ ಮೇಲೆ ವೃಕ್ಷವಾಗಿ ಜನಿಸು ಎಂದು ಶಾಪ ನೀಡುತ್ತಾನೆ. ನಂತರ ತನ್ನ ತಪ್ಪಿನ ಅರಿವಾದ ಅಪ್ಸರೆಯು ಗಣಪತಿಯ ಬಳಿ ಕ್ಷಮೆ ಕೇಳುತ್ತಾಳೆ. ತನ್ನ ಕೋಪವನ್ನು ನಿಯಂತ್ರಣಕ್ಕೆ ತಂದುರಕೊಂಡ ಗಣಪನು ಹೇ ಮಾತೆ, ಶ್ರೀಕೃಷ್ಣನು ನಿನ್ನನ್ನು ವಿವಾಹವಾಗುತ್ತಾನೆ. ನೀನು ಸುಖವಾಗಿರುವೆ ಎಂದು ಆಶೀರ್ವದಿಸಿತ್ತಾನೆ.

ಮುಂದೆ ಆ ಅಪ್ಸರೆಯು ತುಳಸಿಯಾಗಿ ಭೂಮಿಯ ಮೇಲೆ ಮರುಜನ್ಮತಾಳುತ್ತಾಳೆ. ತುಳಸಿಗೆ ಗಣಪ ಆಸರೆ ನೀಡದ ಕಾರಣ ಇಂದಿಗೂ ತುಳಿಸಿಯನ್ನು ಗಣಪನಿಗೆ ಅರ್ಪಿಸುವುದಿಲ್ಲ ಎಂದು ಪುರಾಣದ ಕಥೆಗಳು ಹೇಳುತ್ತವೆ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com