ಸಣ್ಣಪುಟ್ಟ ವಿಷಯಗಳಿಗೂ ಅಳುತ್ತಾ ಕೂತರೆ ಅಳುಮುಂಜಿ ಅಂತಾರೆ. ಹಾಗೆಯೇ ಸದಾ ಅಳುವ ಗಂಡಸು, ಸದಾ ನಗುವ ಹೆಂಗಸನ್ನು ನಂಬಬಾರದು ಎಂಬ ಗಾದೆ ಮಾತಿದೆ. ಆದರೆ ಅಳುವುದರಿಂದ ದೇಹಕ್ಕೆ ಹೆಚ್ಚು ಉಪಯೋಗವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನೋವಿಗೆ ಕಣ್ಣು ತುಂಬಿ ಬಂದರೆ ಯಾರದರೂ ಬಂದು ಕಣ್ಣು ಒರೆಸಿ ಸಾಂತ್ವಾನ ಹೇಳಬೇಕೆಂದು ನಿರೀಕ್ಷಿಸಬೇಡಿ, ಯಾಕಂದರೆ ಅತ್ತಷ್ಟು ನಿಮ್ಮ ಮನಸ್ಸು ಹಗುರಾಗುತ್ತದೆ. ಹೃದಯಕ್ಕೂ ಒಳ್ಳೆಯದಾಗುತ್ತದೆ. ಅಳು ಬಂದಾಗ ತಡೆಯಬಾರದು, ಅತ್ತು ಬಿಡಬೇಕು ಎಂದು ಮನಶಾಸ್ತ್ರಜ್ಞರು ತಿಳಿಸಿದ್ದಾರೆ.
ಅಳುವುದರಿಂದ ಕಣ್ಣಿಗೆ ತುಂಬಾ ಒಳ್ಳೆಯದು. ಕಣ್ಣೀರು, ಕಣ್ಣುಗುಡ್ಡೆ ಹಾಗೂ ಕಣ್ಣಿನ ರೆಪ್ಪೆಗಳನ್ನು ನಯಗೊಳಿಸಿ,ನಿರ್ಜಲೀಕರಣದಿಂದ ರಕ್ಷಿಸುತ್ತದೆ.
ಕಣ್ಣೀರು ಕೀಟಾಣು ವಿರೋಧಿ, ಕಣ್ಣೀರು ಕಣ್ಣಿಗೆ ಬರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ದೂಳಿನ ಮೂಲಕ ಗಾಳಿಯಲ್ಲಿ ಬರುವ ಶೇ.90ರಿಂದ 95 ರಷ್ಟು ಕೀಟಾಣುಗಳನ್ನು ಕೇವಲ 5ರಿಂದ 10 ನಿಮಿಷಗಳಲ್ಲಿ ಕೊಲ್ಲುತ್ತದೆ.
ಅಳು ಬಂದಾಗ ಅತ್ತು ಬಿಟ್ಟರೆ ಮನಸ್ಸಿನ ದುಗುಡ ಸಲ್ಪ ಮಟ್ಟಿಗೆ ದೂರಾಗುತ್ತದೆ. ಜೊತೆಗೆ ಮುಂಗೋಪ, ಆಯಾಸ, ಕೋಪ ಮುಂತಾದವುಗಳ ಪ್ರಮಾಣ ಕಡಿಮೆಯಾಗಿ ದುಃಖದ ಮೂಡ್ ನಿಂದ ಹೊರಬರಬಹುದಾಗಿದೆ.
ಕಣ್ಣೀರು ಒತ್ತಡ ಕಡಿಮೆ ಮಾಡುತ್ತದೆ. ಅಳುವುದು ಕಣ್ಣಿಗೆ ಒಂದು ವ್ಯಾಯಾಮವಿದ್ದಂತೆ. ನಾವು ಅತ್ತಾಗ ನಮ್ಮ ಕಣ್ಣಿನಿಂದ ಬರುವ ನೀರು ನಮ್ಮಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿರುವ ಅನುಪಯುಕ್ತ ರಸಾಯನಿಕ ಅಂಶಗಳನ್ನು ಹೊರಹಾಕುತ್ತದೆ. ಇದರಿಂದ ರಕ್ತದೊತ್ತಡ, ಹೃದಯ ಸಮಸ್ಯೆ, ಹಾಗೂ ಜಠರದಲ್ಲಿ ಉಂಟಾಗುವ ಅಲ್ಸರ್ ಅನ್ನು ನಿಯಂತ್ರಿಸುತ್ತದೆ.
ಅಳುವುದರಿಂದ ನಮ್ಮ ಮನಸ್ಸಲ್ಲಿರುವ ಭಾವನೆಗಳನ್ನ ಅದುಮಿಟ್ಟುಕೊಳ್ಳದೇ ಹೊರಹಾಕಬಹುದು. ಹೀಗಾಗಿ ಅಳು ಒಂದು ಚಿಕಿತ್ಸೆ ಕೂಡ ಆಗಿದೆ. ಅಳುವುದರಿಂದ ಹತಾಶೆ, ನೋವು ಖಿನ್ನತೆ ದೂರಾಗುತ್ತದೆ. ಮಿದುಳು ಮತ್ತು ಹೃದಯದ ನಡುವಿನ ಸಂಘರ್ಷವನ್ನು ಅಳು ತಡೆಗಟ್ಟುತ್ತದೆ. ಅಳದೇ ನೋವನ್ನು ಹಿಡಿದಿಟ್ಟುಕೊಂಡರೇ ಅದು ಹೃದಯಕ್ಕೆ ಭಾರವಾಗಿ ಒಮ್ಮೆಲೆ ಸ್ಫೋಟಗೊಂಡರೆ ಹೃದಯಾಘಾತ ಉಂಟಾಗುವ ಸಾಧ್ಯತೆ ಇರುತ್ತದೆ.
ಅಳುವುದರಿಂದ ಮನಸ್ಸು ನಿರಾಳವಾಗುತ್ತದೆ. ಹಗುರವಾಗತ್ತದೆ. ಮನಸ್ಸಲ್ಲಿ ಪ್ರಶಾಂತತೆ ಮೂಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದ್ರೆ. ಅಳು ಬಂದರೆ ಕೂಡಲೇ ಅತ್ತುಬಿಡಿ....
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ