ಲಂಡನ್: ಕರ್ಮಣ್ಯೇ ವಾದಿಕಾ ರಸ್ತೇ, ಮಾಫಲೇಶು ಕದಾಚನ ಅಂತ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ...ನೀನು ಮಾಡಬೇಕಾದ ಕೆಲಸವನ್ನು ಮಾಡು, ಪ್ರತಿಫಲ ದೇವರಿಗೆ ಬಿಡು ಅಂತ ಇದರ ಅರ್ಥ. ಇನ್ನು ನಮ್ಮ ಹಿರಿಯರು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡು, ನೀನು ಮಾಡುವ ಕೆಲಸದ ಮೇಲೆ ನಿನಗೆ ಪ್ರೀತಿ, ಆಸಕ್ತಿ ಇರಲಿ ಅಂತ ಬುದ್ಧಿ ಮಾತು ಹೇಳುತ್ತಾರೆ.
ಈ ಅನುಭವದ ಮಾತುಗಳು ಸತ್ಯ ಅಂತ ಅಧ್ಯಯನವೊಂದು ಹೇಳಿದೆ. ನಾವು ಮಾಡುವ ಕೆಲಸದ ಮೇಲೆ ಭಾವನಾತ್ಮಕ ಸಂಬಂಧ ಹೊಂದಿದ್ದರೆ, ಆ ಕೆಲಸದ ಜೊತೆ ನಮ್ಮನ್ನು ಗುರುತಿಸಿಕೊಂಡರೆ ನಮ್ಮ ಮನಸ್ಸು ಆರೋಗ್ಯ ಮತ್ತು ಸಂತೋಷದಿಂದ ಇರುತ್ತದೆ ಅಂತ ಅಧ್ಯಯನದಲ್ಲಿ ತಿಳಿದುಬಂದಿದೆ.
ಅಯ್ಯೋ ಏನೋ ಒಂದು ಮಾಡ್ಬೇಕಲ್ಲ, ಇವತ್ತು ಆಫೀಸಿಗೆ ಹೋಗ್ಬೇಕಲ್ಲಾ ಅಂತ ಉದಾಸೀನದಿಂದ ಹೊರಟರೆ ನಮ್ಮ ಮನಸ್ಸಿಗೆ ಇನ್ನಷ್ಟು ಬೇಸರ ತರಿಸುತ್ತದೆ. ಅದರ ಬದಲು ನಾವು ಮಾಡುವ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಕೊಂಡರೆ ಶ್ರೇಯಸ್ಸು ಸಿಗುತ್ತದೆ. ಅಲ್ಲದೆ ನಮಗೆ ಅರಿವಿಲ್ಲದಂತೆ ಆ ಕೆಲಸದ ಜೊತೆ ನಾವು ಗುರುತಿಸಿಕೊಳ್ಳುತ್ತೇವೆ. ಸ್ವಲ್ಪ ಸಮಯ ಆದ ನಂತರ ಭಾವನಾತ್ಮಕವಾದ ಸಂಬಂಧ ಬೆಳೆಯುತ್ತದೆ, ಜೊತೆಗೆ ನಾವು ಕೂಡ ಅಭಿವೃದ್ಧಿ ಹೊಂದುತ್ತೇವೆ. ತನ್ನಿಂತಾನಾಗಿಯೇ ಸಂತೋಷ ಸಿಗುತ್ತದೆ ಮತ್ತು ಕೆಲಸ ಮಾಡುವ ಜಾಗದಲ್ಲಿ ಆರೋಗ್ಯಕರ ವಾತಾವರಣ ಮೂಡುತ್ತದೆ.
ಡೆನ್ಮಾರ್ಕ್ ನ ಕೊಪೆನ್ ಹೇಗನ್ ನಲ್ಲಿರುವ ರಾಷ್ಟ್ರೀಯ ಸಂಶೋಧನಾ ಕೇಂದ್ರದಲ್ಲಿ ಥಾಮಸ್ ಕ್ಲೌಸೆನ್ ಮತ್ತು ಅವರ ಸಹೋದ್ಯೋಗಿಗಳು ಸುಮಾರು 5 ಸಾವಿರ ಉದ್ಯೋಗಿಗಳನ್ನು 300 ಗುಂಪುಗಳನ್ನಾಗಿ ಮಾಡಿ ಅವರ ಮೇಲೆ ನಡೆಸಿರುವ ಅಧ್ಯಯನದಿಂದ ಈ ಸತ್ಯ ಬಹಿರಂಗಗೊಂಡಿದೆ.ಅಧ್ಯಯನದ ವರದಿ ಆಕ್ಯುಪೇಷನಲ್ ಅಂಡ್ ಎನ್ವಿರಾನ್ ಮೆಂಟಲ್ ಮೆಡಿಸಿನ್ ಮ್ಯಾಗಜೀನ್ ನಲ್ಲಿ ಬಂದಿದೆ.
Advertisement