ಬೆಂಗಳೂರು: ಗಂಡನ ವರ್ತನೆಗೆ ಬೇಸತ್ತು ಗೃಹಿಣಿಯೊಬ್ಬರು ತಮ್ಮ ಮುದ್ದಾದ ಮಕ್ಕಳಿಬ್ಬರನ್ನು ನೇಣು ಬಿಗಿದು ಹತ್ಯೆ ಮಾಡಿ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿಯ ಅಲೆಮಾರಿ ಜೀವನ ಮತ್ತು ಆರ್ಥಿಕ ಸಂಕಷ್ಟದಿಂದ ನೊಂದ 26 ವರ್ಷದ ಗಂಗಾದೇವಿ ಮಕ್ಕಳಾದ ಪಾಲ್ಪಸ (6) ಮತ್ತು ಪರ್ಬಲ್(3)ಗೆ ನೇಣು ಬಿಗಿದು ಹತ್ಯೆ ಮಾಡಿದ್ದಾರೆ. ಇನ್ನು ನೇಣು ಬಿಗಿದಿದ್ದ ಹಗ್ಗ ತುಂಡಾದ ಪರಿಣಾಮ 6 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ರಾಮಮೂರ್ತಿನಗರ ಸಮೀಪದ ಎನ್ಆರ್ಐ ಲೇಔಟ್ನಲ್ಲಿ ಸೋಮವಾರ ಮಧ್ಯಾಹ್ನ 12.30ರಲ್ಲಿ ಈ ದಾರುಣ ಘಟನೆ ನಡೆದಿದೆ. ನೇಪಾಳದ ಪದವೀಧರ ಪ್ರೇಮ್ ಎಂಬಾತ ಗಂಗಾದೇವಿಯನ್ನು ಮದುವೆಯಾಗಿದ್ದ. ಈ ದಂಪತಿಗೆ ಮೂವರು ಮಕ್ಕಳು. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಈತ ಒಂದೆಡೆ ನೆಲಸದೆ ಅಲೆಮಾರಿ ಜೀವನ ನಡೆಸುತ್ತಿದ್ದ. ಇದರಿಂದ ಬೇಸತ್ತ ಗಂಗಾದೇವಿ ಈ ನಿರ್ಧಾರಕ್ಕೆ ಬಂದಿದ್ದಾಳೆಂದು ಪ್ರೇಮ್ ವಿಚಾರಣೆಯಲ್ಲಿ ಹೇಳಿಕೆ ನೀಡಿರುವುದಾಗಿ ಪೂರ್ವ ವಿಭಾಗ ಡಿಸಿಪಿ ಸತೀಶ್ಕುಮಾರ್ ತಿಳಿಸಿದ್ದಾರೆ.
ಮಕ್ಕಳನ್ನು ಹತ್ಯೆ ಮಾಡಿದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಪತಿ ಪ್ರೇಮ್ ವಿಚಾರಣೆ ನಡೆಸಲಾಗಿದೆ. ಆದರೆ, ಮೃತಳ ಸಂಬಂಧಿಕರು ಏನು ಹೇಳಿಕೆ ಕೊಡುತ್ತಾರೆ ಎಂಬುದನ್ನು ಪರಿಗಣಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ.
Advertisement