ದಾವಣಗೆರೆ: ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ಶ್ವಾಸಗುರು ಖ್ಯಾತಿಯ ವಚನಾನಂದ ಸ್ವಾಮೀಜಿ ಅವರು ದಲಿತರ ಪಾದ ಪೂಜೆ ಮಾಡಿದ್ದಾರೆ.
ದಾವಣಗೆರೆಯ ಗಾಂಧಿನಗರದ ದಲಿತರ ಕೇರಿಯಲ್ಲಿ ಗುರುವಾರ ವಚನಾನಂದ ಸ್ವಾಮೀಜಿ ಪೌರಕಾರ್ಮಿಕರಾದ ದಾಸಪ್ಪ ಮತ್ತು ಕಮಲಮ್ಮನವರ ಪಾದ ತೊಳೆದು ಪೂಜಿಸಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಪಾದ ಪೂಜೆ ಮಾಡಿದ್ದಾರೆ.
ದಾಸಪ್ಪ ಮತ್ತು ಕಮಲಮ್ಮನವರ ಪಾದ ತೊಳೆದ ಸ್ವಾಮಿಜಿ, ವಿಭೂತಿ, ಹೂ ಇಟ್ಟು ಬಸವಣ್ಣನ ವಚನಗಳನ್ನು ಹೇಳಿದ್ದಾರೆ. ನಂತರ ತಮ್ಮ ತಲೆಯನ್ನು ಅವರ ಪಾದದ ಮೇಲಿಟ್ಟು ಆಶೀರ್ವಾದ ಪಡೆದು, ದಂಪತಿಗಳಿಗೆ ಶಾಲು, ಮೈಸೂರು ಪೇಟಾ ಮತ್ತು ಹೂಗುಚ್ಚ ನೀಡಿ ಸನ್ಮಾನಿಸಿದ್ದಾರೆ.
ನಮಗೆ ದೇವಸ್ಥಾನದ ಒಳಕ್ಕೂ ಪ್ರವೇಶ ನೀಡುತ್ತಿರಲಿಲ್ಲ. ಆದರೆ, ಇಂದು ಸ್ವಾಮಿಜಿಯೇ ನಮ್ಮ ಮನೆಗೆ ಬಂದು ಪಾದ ಪೂಜೆ ಮಾಡಿದ್ದಾರೆ. ಇದು ಕನಸೋ ನನಸೋ ಗೊತ್ತಿಲ್ಲ ಎಂದು ಹೇಳಿ ದಪಂತಿಗಳು ಭಾವುಕರಾಗಿದ್ದಾರೆ.
ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿ ಇಲ್ಲ. ಜಾತಿ ಧರ್ಮ ಮಾಡಿಕೊಂಡಿರುವುದು ಮನುಷ್ಯರೇ. ಅವರು ನಮ್ಮವರಲ್ಲಿ ಒಬ್ಬರು ಎಂದು ಪರಿಗಣಿಸಬೇಕು. ದಲಿತರ ಶೋಷಣೆ ನಿಲ್ಲಬೇಕು ಎಂಬುದು ಅಂಬೇಡ್ಕರ್ ಅವರ ಕನಸಾಗಿತ್ತು. ಇದರ ಬಗ್ಗೆ ಜಾಗೃತಿ ಮೂಡಿಸಲು ದಲಿತರ ಕೇರಿಯಲ್ಲಿ ಪೌರಕಾರ್ಮಿಕರ ಪಾದ ಪೂಜಿಸಲಾಯಿತು ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ.