ಮೈಸೂರು: ಜಿಲ್ಲಾ ನ್ಯಾಯಾಲಯ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ), ಕೇರಳ ಪೊಲೀಸರ ತಂಡ ಮಂಗಳವಾರ ಬಂದು ಪರಿಶೀಲನೆ ನಡೆಸಿದ್ದಾರೆ.
ಆರು ತಿಂಗಳಿನಿಂದ ಈಚೆಗೆ ರಾಷ್ಟ್ರದ ವಿವಿಧೆಡೆ ನ್ಯಾಯಾಲಯದ ಆವರಣಗಳಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟ ಪ್ರಕರಣಗಳಿಗೂ ಇದಕ್ಕೂ ಇರುವ ಸಾಮ್ಯತೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಜೂನ್ 15 ರಂದು ಕೇರಳದ ಕೊಲ್ಲಂ ನ್ಯಾಯಾಲಯದ ಆವರಣದಲ್ಲಿ ಸ್ಫೋಟ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಆಗಮಿಸಿರುವ ಕೇರಳ ವಿಶೇಷ ತಂಡ ತನಿಖೆ ನಡೆಸುತ್ತಿದೆ.
ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳವು ಆಗಮಿಸಿ ಸ್ಫೋಟ ನಡೆದ ಸ್ಥಳ ಹಾಗೂ ನ್ಯಾಯಾಲಯದ ಆವರಣವನ್ನು ಪರಿಶೀಲನೆ ನಡೆಸಿತು. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ನೀಲಮಣಿ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ್ಯಾಯಾಲಯದ ಪಕ್ಕದ ಬಯಲು ಪ್ರದೇಶದಲ್ಲಿ ಕೆಲವು ವೈರ್ಗಳು, ಕಬ್ಬಿಣದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಫೋಟದ ನಂತರ ನಗರದ ಹಲವು ಭಾಗಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರೈಲು ನಿಲ್ದಾಣ, ಅರಮನೆ, ಮೃಗಾಲಯ ಸೇರಿ ದಂತೆ ಹಲವೆಡೆ ಕಟ್ಟೆಚ್ಚರವಹಿಸಲಾಗಿದೆ.
Advertisement