ಬೆಂಗಳೂರು: ಲೋಕಾ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಡಾ.ವೈ.ಭಾಸ್ಕರರಾವ್ ವಿರುದ್ಧ ಸುಮಾರು 554 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಬುಧವಾರ ನಗರದ 78ನೇ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಇಂಜಿನಿಯರ್ ಎಂ.ಎನ್.ಕೃಷ್ಣಮೂರ್ತಿ ಅವರಿಗೆ 1 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕುರಿತು ದಾಖಲಾಗಿದ್ದ 56/15 ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ನ್ಯಾ. ದೇವೇಂದ್ರನ್ ಅವರಿಗೆ ತನಿಖಾಧಿಕಾರಿ ಲಾಬೂರಾಮ್ ಸಲ್ಲಿಸಿದರು. ಇದರಲ್ಲಿ ಭಾಸ್ಕರರಾವ್ ಅವರನ್ನು 7ನೇ ಆರೋಪಿಯನ್ನಾಗಿ ಮಾಡಲಾಗಿದೆ.
ಲೋಕಾಯುಕ್ತ ಹುದ್ದೆಗೆ ಡಿಸೆಂಬರ್ನಲ್ಲಿ ರಾಜೀನಾಮೆ ನೀಡಿದ್ದ ನ್ಯಾ.ಭಾಸ್ಕರರಾವ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರು ಪೂರ್ವಾನುಮತಿ ನೀಡಿರಲಿಲ್ಲ. ವಿಶೇಷ ತನಿಖಾ ತಂಡ ಸತತ ಪತ್ರ ಬರೆದ ಹಿನ್ನೆಲೆಯಲ್ಲಿ ಕೊನೆಗೂ ಅನುಮತಿ ದೊರೆತಿತ್ತು.
ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ 2015ರ ಸೆಪ್ಟೆಂಬರ್ 15ರಂದು 1,545 ಪುಟಗಳ ದೊಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಭಾಸ್ಕರರಾವ್ ಪುತ್ರ ಅಶ್ವಿನ್ರಾವ್ ಮೊದಲ ಆರೋಪಿಯಾಗಿದ್ದರು. ಮಾಜಿ ಪಿಆರ್ಒ ಸಯ್ಯದ್ ರಿಯಾಜ್, ರಿಯಲ್ ಎಸ್ಟೇಟ್ ಉದ್ಯಮಿ ಅಶೋಕ್ಕುಮಾರ್, ಪತ್ರಕರ್ತರಾದ ಶ್ರಿನಿವಾಸಗೌಡ, ಶಂಕರೇಗೌಡ, ಆರ್ಟಿಐ ಕಾರ್ಯಕರ್ತ ವಿ.ಭಾಸ್ಕರ್ ಸೇರಿ ಒಟ್ಟು ಆರು ಮಂದಿಯನ್ನು ಆರೋಪಿಗಳನ್ನಾಗಿಸಿ, 157 ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿತ್ತು.
Advertisement
Advertisement