ಬೆಂಗಳೂರು: ದೇಶವಿರೋಧಿ ಘೋಷಣೆ ಕೂಗಲು ವೇದಿಕೆ ಕಲ್ಪಿಸಿದ್ದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ವಿರುದ್ಧ ಎಬಿವಿಪಿ ನಡೆಸುತ್ತಿರುವ ಪ್ರತಿಭಟನೆಗೆ ನಿವೃತ್ತ ಡಿಜಿಪಿ ಶಂಕರ್ ಬಿದರಿ ಬೆಂಬಲ ನೀಡಿದ್ದಾರೆ.
ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿರುವ ಶಂಕರ್ ಬಿದರಿ, ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಳೆದ 25 ವರ್ಷಗಳಿಂದ ದೇಶದೊಳಗೇ ಇದ್ದುಕೊಂಡು ದೇಶವಿರೋಧಿ ಕೆಲಸ ಮಾಡುತ್ತಿದೆ. ಮೊದಲು ಅಮ್ನೆಸ್ಟಿ ಇಂಟರ್ ನ್ಯಾಷನಲ್ ನ್ನು ಭಾರತದಿಂದ ಓಡಿಸಬೇಕು ಎಂದು ಶಂಕರ್ ಬಿದರಿ ಅಭಿಪ್ರಾಯಪಟ್ಟಿದ್ದಾರೆ.
ದೇಶದ್ರೋಹಿ ಘೋಷಣೆಗೆ ವೇದಿಕೆ ಕಲ್ಪಿಸಿದ್ದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಪರವಾಗಿ ಗೃಹ ಸಚಿವ ಪರಮೇಶ್ವರ್ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಂಕರ್ ಬಿದರಿ, ಪರಮೇಶ್ವರ್ ಪ್ರಿಮೆಚ್ಯುರ್ ಹೇಳಿಕೆ ನೀಡಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸುತ್ತಿದ್ದರು, ಆದರೆ ಪರಮೇಶ್ವರ್ ತಮ್ಮ ಹೇಳಿಕೆ ಮೂಲಕ ತನಿಖೆ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ, ಅಮ್ನೆಸ್ಟಿ ಇಂಟರ್ ನ್ಯಾಷನಲ್ ಹಾಗೂ ದೇಶವಿರೋಧಿ ಘೋಷಣೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಶಂಕರ್ ಬಿದರಿ ಆಗ್ರಹಿಸಿದ್ದಾರೆ.
Advertisement