ಸಿಎಂ ಪುತ್ರ ಡಾ.ಯತೀಂದ್ರ ಅವರಿಂದ ಕಾಲುವೆ ಪರಿಶೀಲನೆ: ಹೂಳೆತ್ತುವಂತೆ ಅಧಿಕಾರಿಗಳಿಗೆ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಿಗಳ ಜೊತೆ ವರುಣಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು...
ಡಾ.ಯತೀಂದ್ರ
ಡಾ.ಯತೀಂದ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಿಗಳ ಜೊತೆ ವರುಣಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ, ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಶಿವಶಂಕರ್, ಎಕ್ಸಿಕ್ಯೂಟಿವ್ ಎಂಜಿನಿಯರ್‌ಗಳಾದ ಪ್ರಕಾಶ್, ಬಸವರಾಜೇಗೌಡ, ತಹಶೀಲ್ದಾರ್ ರಮೇಶಬಾಬು, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ, ಬಿಇಒ ವಿವೇಕಾನಂದ ಅವರನ್ನು ಕರೆದುಕೊಂಡು ವರುಣಾ ನಾಲೆ ಹಾಗೂ ಸುತ್ತಮುತ್ತಲಿನ ಕೆರೆಗಳ ಪರಿಶೀಲನೆ ನಡೆಸಿದರು.

ಮೆಲ್ಲಹಳ್ಳಿ, ಹೊಸಹುಂಡಿ, ಹುನಗನಹಳ್ಳಿಹುಂಡಿ, ಕುಪ್ಯ, ಕುಪ್ಪೇಗಾಲ, ಬಟ್ಟಳಿಗೆಹುಂಡಿ, ಬೊಮ್ಮನಾಯಕನಹಳ್ಳಿ, ಕೆಂಪಯ್ಯನಹುಂಡಿ, ಕೀಳನಪುರ, ಹದಿನಾರು, ಆಯರಹಳ್ಳಿಗೆ ಭೇಟಿ ನೀಡಿ ರೈತರ ಕುಂದುಕೊರತೆ ವಿಚಾರಿಸಿದರು.

ಈ ವೇಳೆ ರೈತರು ಮಾತನಾಡಿ, ''ನಮ್ಮ ಊರಿನ ಕೆರೆಗಳಲ್ಲಿ ನೀರು ತುಂಬಿಸಿಕೊಡಿ. 2-3 ವರ್ಷದಿಂದ ಕಾಲುವೆ ಹೂಳು ತೆಗೆದಿಲ್ಲ. ವಿರಿಜಾ ನಾಲೆ ನೀರು ನಿಲ್ಲಿಸಬೇಡಿ. ಭತ್ತ ಬೆಳೆದಿದ್ದೇವೆ, ಈಗ ನೀರು ನಿಲ್ಲಿಸುತ್ತೇವೆ ಅಂದ್ರೆ ಹೇಗೆ,'' ಎಂದು ಪ್ರಶ್ನಿಸಿದರು.

''ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದೇನೆ. ನೀರಿನ ಸಮಸ್ಯೆ ಬಗೆಹರಿಸಿ ನಾಲೆಯ ತುದಿವರೆಗೂ ನೀರು ತಲುಪಿಸಲು ಸುಮಾರು 50 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ,'' ಎಂದು ಡಾ. ಯತೀಂದ್ರ ರೈತರಿಗೆ ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳು ಹಾಗೂ ನೀರಿನ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಡಾ.ಯತೀಂದ್ರ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com