ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಜಿಲ್ಲಾಧಿಕಾರಿ ಸತ್ಯವತಿ ಇತ್ತೀಚಿಗೆ ಕುದುರೆಮುಖ ಟೌನ್ ಶಿಪ್ ಗೆ ಭೇಟಿ ನೀಡಿದ್ದು ರಾಜ್ಯ ಸರ್ಕಾರ ಕುದುರೆಮುಖದಲ್ಲಿ ಸುಮಾರು 950 ಎಕರೆ ಪ್ರದೇಶದಲ್ಲಿ ಪೊಲೀಸ್ ಕಮಾಂಡೋ ತರಬೇತಿ ಕೇಂದ್ರ( ಶಾಲೆ)ಯನ್ನು ಪ್ರಾರಂಭಿಸಲು ಉದ್ದೇಶಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಗಣಿಗಾರಿಕೆಗಾಗಿ ಸರ್ಕಾರದಿಂದ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಟೌನ್ ಶಿಪ್ ಸಂಸ್ಥೆಯ ಅಧೀನದಲ್ಲೇ ಇದೆ. ಪ್ರಮುಖವಾಗಿ ದೈನಂದಿನ ವೇತನ ಕಾರ್ಮಿಕರು ಸಹ ಕೆಲಸ ಕಳೆದುಕೊಂಡಿದ್ದು, ಗುತ್ತಿಗೆಯ ಅವಧಿ ಮುಕ್ತಾಯವಾಗಿದ್ದರೂ ಟೌನ್ ಶಿಪ್ ನಲ್ಲಿರುವ ಸ್ವತ್ತನ್ನು ಇನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿಲ್ಲ.
ಗುತ್ತಿಗೆ ನೀಡಲಾಗಿದ್ದ ಪ್ರದೇಶದಲ್ಲಿ ಈಗ ಸರ್ಕಾರ ಪೊಲೀಸ್ ತರಬೇತಿ ಶಾಲೆಯನ್ನು ಪ್ರಾರಂಭಿಸಲು ಗಂಭೀರ ಚಿಂತನೆ ನಡೆಸಿದೆ. 2008-09 ರಲ್ಲಿ ಕುದುರೆಮುಖದಲ್ಲಿ ಪೊಲೀಸ್ ತರಬೇತಿ ಶಾಲೆ ಪ್ರಾರಂಭ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ಇತ್ತೀಚೆಗಷ್ಟೇ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪುನರುಚ್ಚರಿಸಿದ್ದರು. ಈಗ ಜಿಲ್ಲಾಡಳಿತ ಸಹ ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.
Advertisement