ಬಳ್ಳಾರಿ: ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಳ್ಳಾರಿ ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಕೆಎಎಸ್ ಅಧಿಕಾರಿ ಭೀಮಾನಾಯಕ್ ಗಳಿಸಿದ್ದಾರೆ ಎನ್ನಲಾದ ಅಕ್ರಮ ಆಸ್ತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಭೀಮಾನಾಯಕ್ ಕಾರು ಚಾಲಕ ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತ್ ನೋಟ್ ನಲ್ಲಿ ಬರೆದಿಟ್ಟರುವ ಅಕ್ರಮ ಆಸ್ತಿ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಪುತ್ರಿ ವಿವಾಹಕ್ಕಾಗಿ ಭೀಮಾ ನಾಯಕ್ ಸುಮಾರು 100 ಕೋಟಿ ಕಪ್ಪು ಹಣವನ್ನು ಬಿಳಿಯನ್ನಾಗಿಸಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.
ಮರಿಯಮ್ಮನಹಳ್ಳಿ ಬಳಿ ತಮ್ಮ ಸಹೋದರ ಹಾಗೂ ಸಹೋದರಿಯರ ಹೆಸರಲ್ಲಿ ಭೀಮಾ ನಾಯಕ್ 10 ಎಕರೆ ಭೂಮಿ ಖರೀದಿಸಿದ್ದಾರೆ,ಜೊತೆಗೆ ಭೀಮಾ ನಾಯಕ್ ಪತ್ನಿ ಸಹೋದರಿಯರ ಹೆಸರಲ್ಲಿ ಯಲಹಂಕ ಮತ್ತು ಅಟ್ಟೂರುಗಳಲ್ಲಿ ಎರಡು ನಿವೇಶನ ಖರೀದಿಸಿದ್ದಾರೆ. ಬೆಳಗಾವಿಯ ತಹಶೀಲ್ದಾರ್ ಆಗಿದ್ದಾಗ ಅಲ್ಲಿ ಒಂದು ಬಂಗಲೆ ಖರೀದಿಸಿದ್ದರು. ಹೊಸಪೇಟೆಯ ಬಂಬೂ ಬಜಾರ್ ನಲ್ಲಿ 20 ಗುಂಟೆ ಖಾಲಿ ಜಾಗ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಆರು ಅಧಿಕಾರಿಗಳನ್ನೊಳಗೊಂಡ ಎರಡು ತಂಡ ಆಸ್ತಿಯ ದಾಖಲೆಗಳ ಬಗ್ಗೆ ಪ್ರತ್ಯಕವಾಗಿ ಬೇರೆ ಬೇರೆ ತಾಲೂಕುಗಳಲ್ಲಿ ಪರಿಶೀಲನೆ ನಡೆಸಿದೆ.
Advertisement