ಮೈಸೂರು: ರಾಜಕಾರಣಿಗಳ ದುಬಾರಿ ವೆಚ್ಚದ ವಸ್ತು ಹಾಗೂ ಐಷಾರಾಮಿ ಕಾರುಗಳ ವಿವಾದ ಈಗ ಅವರ ಸಂಬಂಧಿಕರನ್ನು ಸುತ್ತಿಕೊಂಡಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಸಂಬಂಧಿ 70 ಲಕ್ಷ ರೂಪಾಯಿ ಮೌಲ್ಯದ ಜಾಗ್ವಾರ್ ಕಾರು ಹೊಂದಿದ್ದಾರೆಂದು ಕರ್ನಾಟಕ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮ್ ಮೈಸೂರಿನಲ್ಲಿ ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗಳನ್ನು ವಿವಾಹವಾಗಿರುವ ಮೈಸೂರು ವಿವಿ ಕುಲಪತಿ ಕೆ. ರಂಗಪ್ಪ ಅವರ ಪುತ್ರ ಶ್ರೇಯಸ್ 70 ಲಕ್ಷ ರು. ಮೌಲ್ಯದ ಜಾಗ್ವಾರ್ ಕಾರು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ರಂಗಪ್ಪ ಅವರು ಕೆಎಸ್ಒಯು ಉಪಕುಲಪತಿಯಾಗಿದ್ದಾಗ ಅಂದರೆ 2013 ರಲ್ಲಿ ಈ ಕಾರು ಖರೀದಿಸಲಾಯಿತು. ಉಪಕುಲಪತಿ ಆಗುವ ಮುನ್ನ ರಂಗಪ್ಪ ಸಾಮಾನ್ಯ ಕಾರಿನಲ್ಲಿ ಓಡಾಡುತ್ತಿದ್ದರು ಎಂದು ಆಪಾದಿಸಿದರು.
ಸಿದ್ದರಾಮಯ್ಯ ಅವರ ವಾಚ್ ಬಗ್ಗೆ ಪ್ರಶ್ನಿಸುವ ಎಚ್ ಡಿ ಕುಮಾರಸ್ವಾಮಿ ಶ್ರೇಯಸ್ ಜಾಗ್ವಾರ್ ಕಾರಿನ ಬಗ್ಗೆ ಹಾಗೂ ಮೈಸೂರು ವಿವಿ ಅವ್ಯವಹಾರದ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಹ್ಯೂಬ್ಲಾಟ್ ವಾಚ್ ಅನ್ನು ಸರ್ಕಾರದ ಆಸ್ತಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿರುವ ಅವರು ವಾಚ್ ವಿಷಯದಲ್ಲಿ ಸಂಸದ ಪ್ರತಾಪ್ ಸಿಂಹ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಕೆಎಸ್ಒಯು ಅವ್ಯವಹಾರಗಳ ಬಗ್ಗೆ ನ್ಯಾಯಮೂರ್ತಿ ಭಕ್ತ ವತ್ಸಲ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಫೆಬ್ರವರಿ 26 ರಂದು ರಾಜಭವನ್ ಚಲೋ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.
Advertisement